ಮಂಗಳೂರು: ಎಲ್ಲಿ ರಂಗ ಮಂದಿರ ಇದೆಯೋ ಅದು ನಾಗರಿಕ ಸಮಾಜವಾಗುತ್ತದೆ. ಎಲ್ಲಿ ರಂಗಮಂದಿರ ಇಲ್ಲವೋ ಅದು ಅನಾಗರಿಕ ಸಮಾಜವೆನಿಸುತ್ತದೆ. ಆದ್ದರಿಂದ ಅವಶ್ಯವಾಗಿ ಮಂಗಳೂರಿಗೊಂದು ರಂಗಮಂದಿರ ಬೇಕು ಎಂದು ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಒತ್ತಾಯಿಸಿದರು.
ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಮೈಸೂರು ರಂಗಾಯಣದಿಂದ ಆಯೋಜನೆಗೊಂಡಿರುವ ಡಾ.ಎಸ್.ಎಲ್.ಭೈರಪ್ಪನವರ ‘ಪರ್ವ’ ಕಾದಂಬರಿಯ ರಂಗ ಪ್ರಯೋಗದ ಸಂದರ್ಭ ಮಾತನಾಡಿದ ಅವರು ಸರ್ಕಾರದ ಭಾಗವಾದ ನಾನು ಸರ್ಕಾರಕ್ಕೆ ಒತ್ತಾಯ ಮಾಡುವುದೇನೆಂದರೆ, ತಕ್ಷಣ ಸರ್ಕಾರ ಮಂಗಳೂರು ನಗರದಲ್ಲಿ ರಂಗ ಮಂದಿರ ನಿರ್ಮಾಣ ಮಾಡುವ ಮೂಲಕ ಪ್ರೊತ್ಸಾಹ ನೀಡಬೇಕು ಎಂದರು.
ಕರಾವಳಿ ಖ್ಯಾತ ರಂಗ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಲ್ ಬೈಲ್ ನಾಟಕಕ್ಕೆ ಚಾಲನೆ ನೀಡಿದರು. ‘ಪರ್ವ’ ಕಾದಂಬರಿಯ 32ನೇ ರಂಗ ಪ್ರಯೋಗ ಮಂಗಳೂರಿನಲ್ಲಿ ನಡೆಯುತ್ತಿದೆ. ಸುಮಾರು ಏಳು ಗಂಟೆಯ ನಾಟಕವನ್ನು ವೀಕ್ಷಿಸಲು ರಂಗಮಂದಿರ ಪೂರ್ತಿ ಜನ ತುಂಬಿ ತುಳುಕುತ್ತಿತ್ತು. ರಂಗಾಸಕ್ತರು ಆಸಕ್ತಿಯಿಂದ ನಾಟಕವನ್ನು ವೀಕ್ಷಿಸಿದರು