ಮಂಗಳೂರು: ಮಹಿಳಾ ಸಿಬ್ಬಂದಿಯ ಮೇಲೆ ತಲವಾರಿನಿಂದ ದಾಳಿ ನಡೆಸಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಆರೋಪಿಯನ್ನು ಕುಂದಾಪುರದ ನಿವಾಸಿ ನವೀನ್ ಎಂದು ಗುರುತಿಸಲಾಗಿದ್ದು, ಈತ ಕುಂದಾಪುರ ನ್ಯಾಯಾಲಯದಲ್ಲಿ ಜವಾನನಾಗಿ ಕೆಲಸ ಮಾಡುತ್ತಿದ್ದ ಎಂದು ಹೇಳಲಾಗಿದೆ. ಡಯಟ್ ಸಂಸ್ಥೆಗೆ ಇಂದು ಮಧ್ಯಾಹ್ನ 12.45ರ ಸುಮಾರಿಗೆ ಉಪನ್ಯಾಸಕಿ ಒಬ್ಬರಿಗೆ ಗಿಪ್ಟ್ ನೀಡಲು ಇದೆ ಎಂದು ಕೇಳಿಕೊಂಡು ಬಂದಿದ್ದ ನವೀನ್ ಏಕಾಏಕಿ ಚೀಲದಲ್ಲಿದ್ದ ಮಚ್ಚು ತೆಗೆದು ಸಿಬಂದಿ ಮೇಲೆ ಹಲ್ಲೆ ಮಾಡಿದ್ದಾನೆ.
ಆ ಸಂದರ್ಭ ಅಲ್ಲಿದ್ದ ಡಿ ದರ್ಜೆಯ ಮಹಿಳಾ ಸಿಬ್ಬಂದಿ ತಡೆಯಲು ಆಗಮಿಸಿದ್ದು, ಆಕೆಯ ಮೇಲೂ ಕೂಡ ಹಲ್ಲೆ ನಡೆದಿದೆ. ನಿರ್ಮಲಾ, ರಿನಾ ರಾಯ್, ಗುಣವತಿ ಮೇಲೆ ತಲ್ವಾರ್ ದಾಳಿ ನಡೆಸಿದ್ದು, ಈ ಪೈಕಿ ನಿರ್ಮಲಾ ಅವರ ಸ್ಥಿತಿ ಗಂಭೀರವಾಗಿದೆ. ಮೂವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆರೋಪಿ ನವೀನ್ 2012ರಲ್ಲಿ ಡಯಟ್ ಕಾಲೇಜಿನಲ್ಲಿ ಡಿಎಡ್ ಮುಗಿಸಿ ಹೋಗಿದ್ದ. ಆ ಬಳಿಕವೂ ಡಯಟ್ನ ಚಟುವಟಿಕೆಗಳ ಬಗ್ಗೆ ಈತ ಮಾಹಿತಿ ಪಡೆದುಕೊಳ್ಳುತ್ತಿದ್ದ. ಮಾನಸಿಕ ಅಸ್ವಸ್ಥನಂತೆ ಕಂಡು ಬರುತ್ತಿದ್ದ ಈತನನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಇದೇ ವೇಳೆ ಆಸ್ಪತ್ರೆಗೆ ಭೇಟಿ ನೀಡಿ ಹಲ್ಲೆಗೊಳಗಾದವರ ಯೋಗಕ್ಷೇಮ ವಿಚಾರಿಸಿದ್ದಾರೆ. ಬರ್ಕೆ ಠಾಣೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.