ಮಂಗಳೂರು: ನಗರದ ವೈದ್ಯರೊಬ್ರು ಸೂಪರ್ ಮಾರ್ಕೆಟ್ ನಲ್ಲಿ ಮಾಸ್ಕ್ ಹಾಕುವ ವಿಚಾರದಲ್ಲಿ ಅಲ್ಲಿನ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ಡಾ. ಬಿ.ಎಸ್. ಕಕ್ಕಿಲ್ಲಾಯ ಎಂಬ ವೈದ್ಯರು ಈ ಹಿಂದೆಯೂ ಕೊರೊನಾ ತಡೆಯಲು ಮಾಸ್ಕ್ ಹಾಕಬೇಕಿಲ್ಲ ಎಂದಿದ್ದರು. ಲಾಕ್ ಡೌನ್ ಮಾಡುವ ಅವಶ್ಯಕತೆಯೂ ಇಲ್ಲ ಎಂದು ಪ್ರತಿಪಾದಿಸಿದ್ದರು. ಸರಕಾರದ ಲಾಕ್ ಡೌನ್ ಘೋಷಣೆ ಮೂರ್ಖ ನಿರ್ಧಾರ ಎಂದೂ ಟೀಕಿಸಿದ್ದರು.
ಈ ಬಾರಿ ಮತ್ತೆ ಲಾಕ್ ಡೌನ್ ಘೋಷಿಸಿದ್ದು, ಈ ಬಗ್ಗೆಯೂ ಟೀಕೆ ಮಾಡಿದ್ದಾರೆ. ಇದೀಗ ಸೂಪರ್ ಮಾರ್ಕೆಟಿಗೆ ದಿನಸಿ ವಸ್ತು ಖರೀದಿಗಾಗಿ ಸ್ವತಃ ವೈದ್ಯರು ತೆರಳಿದ್ದರು. ಮುಖಕ್ಕೆ ಮಾಸ್ಕ್ ಹಾಕದೇ ಬಂದಿದ್ದ ವೈದ್ಯರಲ್ಲಿ ಮಾಸ್ಕ್ ಹಾಕುವಂತೆ ಸಿಬ್ಬಂದಿ ಸೂಚಿಸಿದ್ದಾರೆ. ಆದರೆ, ನಾನು ಮಾಸ್ಕ್ ಹಾಕಲ್ಲ. ಮಾಸ್ಕ್ ಯಾಕೆ ಹಾಕಬೇಕು? ಮಾಸ್ಕ್ ನಿಂದ ಕೊರೊನಾ ಎದುರಿಸಲು ಸಾಧ್ಯವಿಲ್ಲ ಎಂದು ಹೇಳ್ಕೊಂಡು ಬಂದವನು ನಾನು. ಈಗ ನಾನೇ ಮಾಸ್ಕ್ ಹಾಕಬೇಕಾ? ಎಂದು ಕೇಳಿದ್ದಾರೆ. ಆದರೆ, ಎಲ್ಲರೂ ಮಾಸ್ಕ್ ಹಾಕಲೇಬೇಕೆಂದು ನಿಯಮವಿದೆ. ಹಾಗಾಗಿ ಹೇಳುತ್ತಿದ್ದೇವೆ ಎಂದಿದ್ದಾರೆ ಸಿಬಂದಿ.
ಅಷ್ಟೇ ಅಲ್ಲದೆ, ಹೀಗೆ ವಾಗ್ವಾದ ಮಾಡುವ ಸಿಸಿ ಟಿವಿ ವೀಡಿಯೊವನ್ನು ಸಿಬಂದಿ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ‘ಸರಕಾರದ ಲಾಕ್ ಡೌನ್ ಫೂಲಿಷ್ ನಿರ್ಧಾರ. ನಾನು ಮಾಸ್ಕ್ ಹಾಕಲ್ಲ’ ಎನ್ನುವ ವಿಚಾರ ವೀಡಿಯೊದಲ್ಲಿದೆ.