ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಕೈಗಾರಿಕಾ ಅಭಿವೃದ್ದಿಗಾಗಿ ಮಂಗಳೂರು ತಾಲೂಕಿನ ಮುಲ್ಕಿ ಪಂಚಾಯತಿಯ ಬಳ್ಕುಂಜೆ, ಕೊಲ್ಲೂರು ಮತ್ತು ಐಕಳ ಪಂಚಾಯತ್ನ ಉಳೆಪಾಡಿ ಗ್ರಾಮಗಳ 1,091 ಎಕರೆ ಭೂಮಿಯನ್ನು ತನ್ನ ಸ್ವಾಧೀನಕ್ಕೆ ತರಲು ನೋಟಿಸ್ ನೀಡಿದೆ.
ಈ ನಡೆಯ ವಿರುದ್ಧ ನೋಟಿಸ್ ನೀಡಿದ ಎಲ್ಲ ಗ್ರಾಮಗಳ ಜನರು ಕೆಐಎಡಿಬಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಫಲವತ್ತಾದ ಕೃಷಿಭೂಮಿಯಲ್ಲಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಕೆಐಎಡಿಬಿ ಉಳೆಪಾಡಿ ಗ್ರಾಮದಲ್ಲಿ ಸೋಮವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆಯಲ್ಲಿ ಮಾತನಾಡಿದ ಉಳೆಪಾಡಿ ಗ್ರಾಮದ ಮಹಿಳೆ ಶ್ರೀದೇವಿ, “ನಾವಿಲ್ಲಿ ನಾಲ್ಕು ವರ್ಷಗಳಿಂದ ವಾಸವಾಗಿದ್ದು, ನಾಲ್ಕು ಸೆಂಟ್ಸ್ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದೇನೆ. ಈ ಮನೆ ನಿರ್ಮಿಸಲು ಸ್ವಸಹಾಯಕ ಗುಂಪಿನಿಂದ 2 ಲಕ್ಷ ಸಾಲ ಪಡೆದಿದ್ದು, ಸಾಲ ತೀರಿಸಲು ಕಷ್ಟಪಟ್ಟು ದುಡಿಯುತ್ತಿದ್ದೇನೆ. ಇಲ್ಲಿ ನಾನಷ್ಟೇ ಅಲ್ಲ ನನ್ನಂತೆ ಐದಾರು ಮನೆಗಳಿವೆ. ಇಲ್ಲಿಂದ ನಮ್ಮನ್ನು ಹೊರ ಹಾಕಿದರೆ, ನಾವೆಲ್ಲಿಗೆ ಹೊಗಿ ವಾಸಮಾಡಬೇಕು?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.