ಮಂಗಳೂರು: ಖಾಸಗಿ ಸಿಟಿಬಸ್ ಚಲಾಯಿಸುತ್ತಿರುವ ಸಂದರ್ಭ ಚಾಲಕ ಲೋ ಬಿಪಿಯಿಂದಾಗಿ ಸ್ಟೇರಿಂಗ್ ಮೇಲೆ ಕುಸಿದು ಬಿದ್ದ ಘಟನೆ ನಗರದ ಹೊರವಲಯದ ಅಡ್ಯಾರ್ನಲ್ಲಿ ನಡೆದಿದ್ದು, ಇಂತಹ ಅಪಾಯದ ಸಂದರ್ಭದಲ್ಲೂ ಬಸ್ ನಲ್ಲಿದ್ದ ಮತ್ತು ಇತರ ವಾಹನಗಳ ಪ್ರಯಾಣಿಕರ ಜೀವ ಉಳಿಸಿ ಚಾಲಕ ಮಾನವೀಯತೆ ಮೆರೆಯುವಲ್ಲಿ ಸಫಲರಾಗಿದ್ದಾರೆ.
ಬಸ್ ಚಾಲಕನನ್ನು ಪುತ್ತೂರು ಮೂಲಕ ಸಂತೋಷ್ ಎಂದು ಗುರುತಿಸಲಾಗಿದೆ.
ಏನಿದು ಘಟನೆ?
ಪುತ್ತೂರಿನಿಂದ ಮಂಗಳೂರಿನ ಸ್ಟೇಟ್ ಬ್ಯಾಂಕಿಗೆ ಬರುತ್ತಿದ್ದ ಸೇಫ್ ವೇ ಟ್ರಾವೆಲ್ಸ್ ಹೆಸರಿನ ಖಾಸಗಿ ಬಸ್ ಅಡ್ಯಾರ್ ಸಮೀಪಿಸುತ್ತಿದ್ದಂತೆ ಚಾಲಕನಿಗೆ ಕಣ್ಣು ಮಂಜಾಗಿದ್ದು ತಕ್ಷಣ ಬಸ್ ನಿಲ್ಲಿಸಿದ್ದಾನೆ. ಚಾಲಕನಿಗೆ ಕಣ್ಣು ಮಂಜಾಗುತ್ತಲೇ ಬಸ್ ಹೆದ್ದಾರಿ ಬದಿಯ ಸಹ್ಯಾದ್ರಿ ಕಾಲೇಜಿನ ಗೇಟ್ ಮುಂಭಾಗದಲ್ಲಿಯೇ ಬಸ್ ನಿಂತಿದೆ. ಬಸ್ನಲ್ಲಿ ಜನರು ತುಂಬಿದ್ದು, ಚಾಲಕನ ನಿಯಂತ್ರಣ ಸ್ಪಲ್ಪ ತಪ್ಪುತ್ತಿದ್ದರೂ ಪ್ರಾಣಾಪಾಯ ಸಂಭಂವಿಸುತ್ತಿತ್ತು. ಬಸ್ ನಿಲ್ಲಿಸಿದ ನಂತರ ಚಾಲಕ ಕೆಳಗೆ ಬೀಳುತ್ತಿದ್ದಂತೆ ಸ್ಟೇರಿಂಗ್ನ ಎಡೆಯಿಂದ ಚಾಲಕನನ್ನು ಎಳೆದಿದ್ದಾರೆ.
ಚಾಲಕ ಸಂತೋಷ್ ಒಂದು ವರ್ಷದಿಂದ ಅದೇ ಬಸ್ನಲ್ಲಿ ಕೆಲಸ ಮಾಡುತ್ತಿದ್ದು, ಬಸ್ ಕೂಡ ಸಾಕಷ್ಟು ವೇಗದಲ್ಲಿ ಚಲಿಸುತ್ತಿತ್ತು. ಆದ್ರೆ ಸಂತೋಷ್ ಅವರ ಸಮಯ ಪ್ರಜ್ಞೆಯಿಂದ ದುರಂತ ತಪ್ಪಿ ಹೋಗಿದೆ ಎಂದು ಬಸ್ನ ಕಂಡಕ್ಟರ್ ಶೇಖರ್ ಹೇಳಿದ್ದಾರೆ.
ಆರಂಭದಲ್ಲಿ ಫಿಟ್ಸ್ ಬಂದಿದೆ ಎನ್ನಲಾಗಿತ್ತು. ಪ್ರಯಾಣಿಕರು ಮತ್ತು ಸಿಬ್ಬಂದಿಯೂ ಅದನ್ನೇ ಹೇಳಿದ್ದರು. ವೈದ್ಯರು ಪರಿಶೀಲಿಸಿ, ಲೋ ಬಿಪಿಯಿಂದಾಗಿ ಕುಸಿದು ಬಿದ್ದಿರುವುದಾಗಿ ತಿಳಿಸಿದ್ದಾರೆ. ಚಾಲಕನ ಅಸಮರ್ಪಕ ಆಹಾರ ಸೇವನೆಯಿಂದಾಗಿ ಕಡಿಮೆ ರಕ್ತದೊತ್ತಡ ಕಂಡುಬಂದಿತ್ತು ಎಂದು ತಿಳಿದುಬಂದಿದೆ.