ಮಂಗಳೂರು: ಪ್ರತಿಷ್ಠಿತ ಕಂಬಾರ್ ಮನೆತನದ, ಕೈಕಂಬದಲ್ಲಿ ಬಡ ರೋಗಿಗಳಿಗೆ ನೆರವಾಗುತ್ತಿದ್ದ ಡಾ. ಎ.ಕೆ. ಖಾಸಿಮ್ (51) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಸೌದಿ ಅರೇಬಿಯಾದ ಮಕ್ಕಾ ನಗರದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕೇರಳದ ಉಪ್ಪಳದವರಾದ ಡಾ. ಎ.ಕೆ.ಖಾಸಿಂ ಮಂಗಳೂರಿನ ಫಳ್ನೀರ್ನಲ್ಲಿ ಬಹಳ ವರ್ಷಗಳ ಹಿಂದಿನಿಂದಲೂ ಮನೆ ಮಾಡಿಕೊಂಡಿದ್ದರು. ಸೌದಿ ಅರೇಬಿಯಾದ ಮೆಕ್ಕಾ ನಗರದ ಝಹ್ರತುಲ್ ಕುದಾಯಿ ಏಷಿಯನ್ ಪಾಲಿ ಕ್ಲಿನಿಕ್ ಆಸ್ಪತ್ರೆಯಲ್ಲಿ ಇವರು ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ಶುಕ್ರವಾರ ಇವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
2019ರ ಜನವರಿಯಲ್ಲಿ ಸೌದಿಯಿಂದ ಊರಿಗೆ ಬರುವ ಸಂದರ್ಭದಲ್ಲಿ ಅವರು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಮುಂಬೈ ಮೂಲದ ಮಹಿಳೆಗೆ ಹೃದಯಾಘಾತವಾಗಿತ್ತು. ಈ ಸಂದರ್ಭದಲ್ಲಿ ಖಾಸಿಂ ಅವರು ವಿಮಾನದಲ್ಲಿಯೇ ಚಿಕಿತ್ಸೆ ನೀಡಿ ಮಹಿಳೆಯನ್ನು ಬದುಕಿಸಿದ್ದರು.
ಮಂಗಳೂರು ಕೆ.ಎಂ.ಸಿ.ಯಲ್ಲಿ ಎಂಬಿಬಿಎಸ್ ಮುಗಿಸಿ ಎಮರ್ಜೆನ್ಸಿ ಹೆಲ್ತ್ ಕೋರ್ಸ್ ಮಾಡಿದ್ದರು. ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿಯಾಗಿದ್ದರು. ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಸಹಪಾಠಿಯಾಗಿದ್ದ ಖಾಸಿಮ್ ಅವರ ಜೊತೆ ಅನ್ಯೋನ್ಯವಾಗಿದ್ದರು. ಕಾಂಗ್ರೆಸ್ ನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ದಿವಂಗತ ಕೋಡೋತ್ ಗೋವಿಂದನ್ ನಾಯರ್, ಸಿ.ಕೆ ಶ್ರೀಧರನ್, ಯು.ಟಿ.ಖಾದರ್ ಅವರ ಆಪ್ತರಾಗಿದ್ದರು.
ಖಾಸಿಂ ಅವರು ಕಳೆದ 26 ವರ್ಷಗಳಿಂದ ಉಪ್ಪಳ, ಮಂಗಳೂರು, ಸೌದಿ ಅರೇಬಿಯಾದಲ್ಲಿ ವೈದ್ಯಕೀಯ ಸೇವೆ ಮಾಡಿದ್ದರು. ಖಾಸಿಮ್ ಅವರು ಸಂಘಟನಾತ್ಮಕವಾಗಿ ತೊಡಗಿಸಿಕೊಂಡಿದ್ದು, ಮಂಗಳೂರು ಎಂ ಫ್ರೆಂಡ್ಸ್ ಟ್ರಸ್ಟ್ನ ಎನ್ಆರ್ಐ ಸದಸ್ಯರಾಗಿದ್ದರು. ಅವರು ಕಾಸರಗೋಡು ಡಿಸಿಸಿ ಸದಸ್ಯರಾಗಿದ್ದರು. ಮಂಗಲ್ಪಾಡಿ ಅರ್ಬನ್ ಸೇವಾ ಸಹಕಾರಿ ಬ್ಯಾಂಕಿನ ಸ್ಥಾಪಕ ಅಧ್ಯಕ್ಷರಾಗಿದ್ದ ಡಾ. ಖಾಸಿಮ್ ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಹೊಂದಿದ್ದರು. ಸಮಾಜ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು.
ಮೃತರು ತಂದೆ, ತಾಯಿ, ಪತ್ನಿ, ಇಬ್ಬರು ಪುತ್ರರಾದ ಡಾ. ಕಾಮಿಲ್, ಎಂಬಿಬಿಎಸ್ ವಿದ್ಯಾರ್ಥಿ ಶಾಮಿಲ್ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.