ವಿಟ್ಲ: ವಾರಣಾಸಿ ಫಾರ್ಮ್ಗೆ ಕೃಷಿ ಅಧ್ಯಯನಕ್ಕಾಗಿ ಬಂದಿದ್ದ ವೈದ್ಯೆಯೊಬ್ಬರು ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕೇಪು ಗ್ರಾಮದ ಅಡ್ಯನಡ್ಕದಲ್ಲಿ ನಡೆದಿದೆ.
ಡಾ.ಮೈಜೀ ಕರೋಲ್ ಫರ್ನಾಂಡೀಸ್ (31) ಮೃತ ಯುವತಿ. ಕೃಷಿ ಅಧ್ಯಯನಕ್ಕೆಂದು ಕೇಪು ಗ್ರಾಮದ ವಾರಾಣಸಿ ಫಾರ್ಮ್ ಹೌಸ್ಗೆ ಎರಡು ದಿನಗಳ ಹಿಂದೆ ಮೈಜಿ ಆಗಮಿಸಿದ್ದರು. ಮಂಗಳವಾರ ಸೆಪ್ಟೆಂಬರ್ 14 ರಂದು ಸಂಜೆ 5.45 ರ ಫಾರ್ಮ್ ಹೌಸ್ನ ಕೃಷಿ ಹೊಂಡದ ಬಳಿ ಏಕಾಂಗಿಯಾಗಿ ತೆರಳಿದ್ದಾರೆ. ಆದರೆ ಆಯಾತಪ್ಪಿ ಕೆರೆಗೆ ಬಿದ್ದಿದ್ದಾರೆ. ಸಾಕಷ್ಟು ಸಮಯ ಕಳೆದರೂ ಆಕೆ ಹಿಂತಿರುಗದ ಕಾರಣ, ಹುಡುಕಾಟ ನಡೆಸಿದ್ದು ಕೊಳದೊಳಗೆ ದೇಹ ಪತ್ತೆಯಾಗಿದೆ. ನೀರಿನಡಿಯಿಂದ ದೇಹವನ್ನು ಹೊರ ತೆಗೆದು ಆಸ್ಪತ್ರೆಗೆ ಸಾಗಿಸಿತ್ತಾದರೂ ಚಿಕಿತ್ಸೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಮೃತ ಮೈಜೀ ಮಂಗಳೂರಿನ ಪ್ರಶಾಂತನಗರ ನಿವಾಸಿ. ಮಾಹಿತಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿರುವ ವಿಟ್ಲ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ವೈದ್ಯ ವೃತ್ತಿಯಲ್ಲಿ ತೊಡಗಿಸಿಕೊಳ್ಳದ ಡಾ.ಮೈಜೀ ಕರೋಲ್ ಫರ್ನಾಂಡೀಸ್ ಕೃಷಿ ಬಗ್ಗೆ ಸಂಶೋಧನೆ ನಡೆಸುವ ನಿಟ್ಟಿನಲ್ಲಿ ವಾರಣಾಸಿ ಪಾರ್ಮ್ ಗೆ ಕೆಲವು ದಿನಗಳ ಹಿಂದೆಯೂ ಆಗಮಿಸಿದ್ದರು. ಎರಡು ದಿನ ಊರಿಗೆ ಹೋಗಿ ಮತ್ತೆ ಬಂದು ಇಲ್ಲೇ ವಾಸ್ತವ್ಯ ನಡೆಸುತ್ತಿದ್ದರು.