ಬೆಳ್ತಂಗಡಿ: ಅಕ್ರಮ ಜಾನುವಾರ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಸೋಣಂದೂರು ಶಾಲೆ ಬಳಿ ನಡೆದಿದೆ.
ಗಣೇಶ್( 32 ) ಹಾಗೂ ನವಾಜ್ (26 ) ಬಂಧಿತ ಆರೋಪಿಗಳು. ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಉಪ ನಿರೀಕ್ಷಕರಾದ ಕುಟ್ಟಿ ಎಂ.ಕೆ ರವರು ಸಿಬ್ಬಂದಿಗಳೊಂದಿಗೆ ಸೋಣಂದೂರು ಶಾಲೆ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಬೆಳ್ತಂಗಡಿ ಕಡೆಯಿಂದ ಬಂದ KA21B9165 ನೇ ನೋಂದಣಿ ಸಂಖ್ಯೆಯ ಮಹಿಂದ್ರಾ ಕಂಪೆನಿಯ ಆಲ್ಫಾ ಮಿನಿ ಟೆಂಪೋ ವಾಹನವನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ವಾಹನವನ್ನು ಪರಿಶೀಲಿಸಿದಾಗ ಆರೋಪಿಗಳು 2 ಕಂದು ಬಣ್ಣದ ಹೋರಿ ಕರುಗಳನ್ನು ಯಾವುದೇ ಅಧಿಕೃತ ದಾಖಲಾತಿಗಳು ಇಲ್ಲದೆಯೆ ಹಿಂಸಾತ್ಮಕವಾಗಿ ತುಂಬಿಸಿ ಮಾಂಸ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಆರೋಪಿಗಳಿಂದ 2 ಹೋರಿ ಕರುಗಳನ್ನು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಮಿನಿ ಟೆಂಪೋ ವಾಹನವನ್ನು ಸ್ವಾಧೀನಪಡಿಸಿಕೊಂಡಿದ್ದು, ವಶಪಡಿಸಿಕೊಳ್ಳಲಾದ 2 ಜಾನುವಾರುಗಳ ಒಟ್ಟು ಮೌಲ್ಯ ರೂ. 2,000 ಮತ್ತು ಜಾನುವಾರು ಸಾಗಾಟಕ್ಕೆ ಬಳಸಿದ ವಾಹನದ ಅಂದಾಜು ಮೌಲ್ಯ ರೂ. 1,00,೦೦೦ ಆಗಿರುತ್ತದೆ.ಸದ್ಯ ಪೂಂಜಾಲಕಟ್ಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.