ಕೊಡಗು: ಮಂಗಳಮುಖಿ ಅನ್ನೋ ಕಾರಣಕ್ಕೆ ನನಗೆ ಮನೆ ನೀಡುತ್ತಿಲ್ಲ ಎಂದು ಕೊಡಗಿನ ಮಡಿಕೇರಿಯಲ್ಲಿ ಮಂಗಳಮುಖಿಯೊಬ್ಬರು ದಯಾ ಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇಲ್ಲಿನ ರಿಹಾನಾ ಅನ್ನೋ ಮಂಗಳಮುಖಿ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ರಿಹಾನಾ ತಮ್ಮ ಮನೆ ಕಳೆದುಕೊಂಡಿದ್ದು ಸದ್ಯ ವಾಸಿಸಲು ಮನೆ ಇಲ್ಲದೇ ಲಾಡ್ಜ್ ವೊಂದರಲ್ಲಿ ವಾಸವಾಗಿದ್ದಾರೆ. ಆದರೆ ಪ್ರತಿ ದಿನ 400 ರೂಪಾಯಿ ನೀಡಿ ಲಾಡ್ಜ್ ನಲ್ಲಿ ಇರೋದು ಕಷ್ಟವಾಗುತ್ತಿದ್ದು, ತಮಗೊಂದು ಮನೆಯ ವ್ಯವಸ್ಥೆ ಕಲ್ಪಿಸುವಂತೆ ಕೊಡಗು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ ಅವರಿಂದ ಯಾವುದೇ ಸ್ಪಂದನೆ ದೊರಕದ ಹಿನ್ನೆಲೆ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ನಾನು ಮಂಗಳಮುಖಿ ಅನ್ನೋ ಕಾರಣಕ್ಕೆ ಮನೆ ಮಾಲೀಕರು ಬಾಡಿಗೆ ನೀಡಲು ನಿರಾಕರಿಸುತ್ತಿದ್ದಾರೆ. ಹಾಗಾದರೆ ನಮಗೆ ಬದುಕಲು ಹಕ್ಕು ಇಲ್ಲವೇ? ಮಂಗಳಮುಖಿಯಾಗಿ ಹುಟ್ಟಿದ್ದು ನನ್ನ ತಪ್ಪಾ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಸಾರ್ವಜನಿಕರು ನಮ್ಮಂಥವರ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.