ಸುಳ್ಯದಿಂದ ನಾಪತ್ತೆಯಾಗಿದ್ದ ಯುವಕನೊಬ್ಬನನ್ನು ಸುಳ್ಯ ಪೊಲೀಸರು ಕಾಸರಗೋಡಿನಲ್ಲಿ ಪತ್ತೆ ಹಚ್ಚಿ ಠಾಣೆಗೆ ಹಾಜರು ಪಡಿಸಿ ಬಳಿಕ ಮನೆಯವರೊಂದಿಗೆ ಕಳುಹಿಸಿಕೊಟ್ಟಿದ್ದಾರೆ.
ಸುಳ್ಯ ಕೆವಿಜಿ ಬಳಿ ಫುಡ್ ಪಾಯಿಂಟ್ ನಲ್ಲಿ ಬಂಟ್ವಾಳ ತಾಲೂಕಿನ ವಾಮಪದವು ನಿವಾಸಿ ನಾಗೇಶ್ (33) ಕೆಲಸ ನಿರ್ವಹಿಸುತ್ತಿದ್ದರು. ಡಿಸೆಂಬರ್ 18ರಂದು ಕ್ಯಾಂಟೀನ್ ನಲ್ಲಿ ಊಟ ಮುಗಿಸಿ ರೂಮಿಗೆ ಹೋಗುತ್ತೇನೆ ಎಂದು ಹೇಳಿ ಹೋದವರು ಮತ್ತೆ ಮರಳಿ ಬಾರದೆ ನಾಪತ್ತೆಯಾಗಿರುವುದಾಗಿ ಕಳೆದ ಒಂದು ತಿಂಗಳ ಹಿಂದೆ ಆತನ ಪತ್ನಿ ಗೀತಾ ಎಂಬುವವರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ಹುಡುಕಾಟ ಪ್ರಾರಂಭಿಸಿ ಎರಡು ದಿನಗಳ ಹಿಂದೆ ಆತ ಕಾಸರಗೋಡು ಸೀತಾಂಗೊಳ್ಳಿ ಪರಿಸರದಲ್ಲಿ ತೋಟ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಿ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ದಿಲೀಪ್ ಮತ್ತು ಸಿಬ್ಬಂದಿ ವರ್ಗದವರು ಸ್ಥಳಕ್ಕೆ ತೆರಳಿ ಆತನನ್ನು ಸುಳ್ಯ ಠಾಣೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಆತನ ಮನೆಯವರನ್ನು ಕರೆಸಿ ಅವರೊಂದಿಗೆ ಕಳುಹಿಸಿ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.