ಕಡಬ: ದಾರಿ ವಿಚಾರಕ್ಕೆ ಗಲಾಟೆ ನಡೆದು ವ್ಯಕ್ತಿಗೆ ಚೂರಿಯಿಂದ ಇರಿದಿರುವ ಘಟನೆ ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದಲ್ಲಿ ನಡೆದಿದೆ. ಅಲಂಗ ನಿವಾಸಿ ಅಲೆಕ್ಸ್ ವರ್ಗೀಸ್ ಎಂಬವರ ಕೈಯ ತೋರು ಬೆರಳಿಗೆ ನೆರೆ ಮನೆಯ ವ್ಯಕ್ತಿಯೊಬ್ಬರು ಚೂರಿಯಿಂದ ಇರಿದು ಗಾಯಗೊಳಿಸಿದ್ದಾರೆ.
ಮೂರು ತಿಂಗಳಿನಿಂದ ಕಾಲು ದಾರಿಯ ವಿಚಾರಕ್ಕೆ ನೆರೆಯ ಈಪನ್ ಮತ್ತು ತೋಮಸ್ ಎಂಬವರಿಗೆ ತಕರಾರಿತ್ತು. 1 ತಿಂಗಳ ಹಿಂದೆ ಕಾಲು ದಾರಿಯ ವಿಚಾರದಲ್ಲಿ ತೋಮಸ್ರವರಲ್ಲಿ ಮಾತನಾಡಲು ಹೋದಾಗ ಬಿಟ್ಟು ಕೊಡುವುದಾಗಿ ತಿಳಿಸಿದ್ದರು. ಮೇ 16ರಂದು ಪಂಚಾಯತ್ ಅಭಿವೃದ್ದಿ ಅಧಿಕಾರಿಯವರು ಸ್ಥಳ ಪರಿಶೀಲನೆಗೆ ಬಂದಿದ್ದ ವೇಳೆ ಅಲೆಕ್ಸ್ ವರ್ಗೀಸ್ ಹಾಗೂ ತೋಮಸ್ರವರ ನಡುವೆ ಗಲಾಟೆ ನಡೆದಿದೆ. ಈ ವೇಳೆಗ ನೆರೆಯ ಮಹಿಳೆಯೊಬ್ಬರು ದನಗಳಿಗೆ ತರಲು ಅದೇ ಕಾಲು ದಾರಿಯಲ್ಲಿ ಹೋಗುತ್ತಿದ್ದಾಗ ತೋಮಸ್ರವರು ಅವಾಚ್ಯವಾಗಿ ಬೈದು ದೂಡಿ ಹಾಕಿದ್ದಾರೆ ಎನ್ನಲಾಗಿದೆ.
-ಈ ವೇಳೆ ಮಹಿಳೆಯ ಬೊಬ್ಬೆ ಕೇಳಿ ಅಲೆಕ್ಸ್ ವರ್ಗೀಸ್ರವರು ಅಲ್ಲಿಗೆ ಹೋದಾಗ ತೋಮಸ್ರವರು ಕೈಯಲ್ಲಿದ್ದ ಚೂರಿಯಿಂದ ಬಲ ಕೈಯ ತೋರು ಬೆರಳಿಗೆ ಇರಿದ್ದಾರೆ. ಹಲ್ಲೆಯಿಂದ ಗಾಯಗೊಂಡಿದ್ದ ಅಲೆಕ್ಸ್ ವರ್ಗೀಸ್ ಅವರನ್ನು ಮಹಿಳೆ ಅಟೋ ರಿಕ್ಷಾವೊಂದರಲ್ಲಿ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದು ಅಲ್ಲಿ ಗಾಯಾಳುಗಳು ಒಳರೋಗಿಯಾಗಿ ದಾಖಲಾಗಿದ್ದಾರೆ.
ಈ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.