ಸುಬ್ರಹ್ಮಣ್ಯ: ಹಣ ದ್ವಿಗುಣವಾಗುತ್ತೆ ಅನ್ನೋ ಆಸೆಯಲ್ಲಿ ಕೊಲ್ಲಮೊಗ್ರದ ಯುವಕನೊಬ್ಬ 34 ಸಾವಿರ ಕಳೆದುಕೊಂಡಿದ್ದಾರೆ. ಕೊಲ್ಲಮೊಗ್ರು ಗ್ರಾಮದ ಬೆಂಡೋಡಿ ಪೂಜಾರಿ ಮನೆ ಲಿಖಿನ್ ಪಿ.ಟಿ. ವಂಚನೆಗೆ ಒಳಗಾದ ಯುವಕ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಜು. 17ರಂದು ಲಿಖಿನ್ ವಾಟ್ಸಾಪ್ ಗೆ ಹಣ ದ್ವಿಗುಣಗೊಳಿಸಿ ಕೊಡುತ್ತೇನೆಂದು ಮೆಸೇಜ್ ಬಂದಿದೆ. ಅದೇ ದಿನ ಅವರು ತಮ್ಮ ನಂಬ್ರದಿಂದ ಆರೋಪಿ ಮೊಬೈಲ್ ನಂಬರ್ ಗೆ 5000/- ರೂಗಳನ್ನು ಕಳುಹಿಸಿದ್ದು, ಮರುದಿನ ಬೆಳಿಗ್ಗೆ ದ್ವಿಗುಣಗೊಳಿಸಿದ ಹಣವನ್ನು ಕೇಳಿದ್ದಾರೆ. ಈ ವೇಳೆ ಬ್ಯಾಂಕ್ ಚಾರ್ಜ್ ಎಂದು 2000 ರೂ., ಜಿಎಸ್ ಟಿ ಚಾರ್ಜ್ 3500 ರೂ. ಕಮಿಷನ್ ಚಾರ್ಜ್ ಎಂದು 4000 ರೂ.ಗಳನ್ನು ಆರೋಪಿ ಪಡೆದಿದ್ದಾರೆ.
ಆರೋಪಿ ಮತ್ತೆ 13000 ರೂಗಳನ್ನು ಕಳುಹಿಸಿ ಇಲ್ಲದಿದ್ದರೇ ನಿನ್ನ ಹಣವನ್ನು ವಾಪಸ್ ಕೊಡುವುದಿಲ್ಲವೆಂದು ಮತ್ತೆ ಬೇಡಿಕೆ ಇರಿಸಿ ಮೊಬೈಲ್ ನಂಬ್ರ ವನ್ನು ಬ್ಲಾಕ್ ಮಾಡುತ್ತೇನೆಂದು ತಿಳಿಸಿದ್ದಾರೆ.ಅದರಂತೆ ಯುವಕ ಮತ್ತೆ 13,000 ರೂಗಳನ್ನು ಕಳುಹಿಸಿದ್ದು, ಒಟ್ಟು 34,500 ರೂಗಳನ್ನು ಆರೋಪಿಯ ಬೇರೆ ಬೇರೆ ನಂಬ್ರ ಗಳಿಗೆ ಯುವಕ ಕಳುಹಿಸಿದ್ದಾರೆ. ವಂಚನೆಗೊಳಗಾದ ಬಗ್ಗೆ ಯುವಕ ಮತ್ತೆ ಆರೋಪಿಗೆ ಕರೆ ಮಾಡಿದಾಗ ಇನ್ನು ಹೆಚ್ಚು ಹಣವನ್ನು ಕಳುಹಿಸು ಇಲ್ಲದಿದ್ದರೆ ನೀನು ಪಾವತಿಸಿದ ಹಣವನ್ನು ಮರಳಿಸುವುದಿಲ್ಲವೆಂದು ಹೇಳಿದ್ದಾನೆ.
ಈ ಬಗ್ಗೆ ಯುವಕ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.