ಬೆಳ್ತಂಗಡಿ: ಮಹಿಳೆಯೊಬ್ಬರಿಗೆ ಪತಿ ವರದಕ್ಷಿಣೆ ಕಿರುಕುಳ ನೀಡಿಸ ಹಲ್ಲೆ ಮಾಡಿದ್ದರಿಂದ ಗಾಯಗೊಂಡ ಮಹಿಳೆ ಬೆಳ್ತಂಗಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಬದ್ಯಾರು ನಿವಾಸಿ ತೀರ್ಥ ಎಂಬವರನ್ನು ಧಾರವಾಡದಲ್ಲಿ ವಾಸವಾಗಿರುವ ಪ್ರವೀಣ್ ಶೆಟ್ಟಿ ಎಂಬವರಿಗೆ ದಿನಾಂಕ 03.09.2017 ರಂದು ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ 2 ತಿಂಗಳುಗಳ ಬಳಿಕ ಅಂದರೆ ದಿನಾಂಕ 03.11.2017 ರಂದು ತೀರ್ಥ ಅವರ ಅತ್ತೆ ಇಂದಿರಾ, ಗಂಡನ ಅಣ್ಣ ಪ್ರಶಾಂತ್ ಶೆಟ್ಟಿ, ಆತನ ಹೆಂಡತಿ ಸುಜಾತ ರವರು ಒಟ್ಟು ಸೇರಿಕೊಂಡು ತೀರ್ಥ ಅವರಿಗೆ ಬೇರೆ ಮನೆ ಮಾಡುವಂತೆ ಚಿತ್ರಹಿಂಸೆ ನೀಡಲು ಆರಂಭಿಸಿದ್ದಾರೆ ಎನ್ನಲಾಗಿದೆ.
ಬಳಿಕ ಮಹಿಳೆ ಪತಿ ಪ್ರವೀಣ್ ಶೆಟ್ಟಿ ಹಾಗೂ ಮಗಳೊಂದಿಗೆ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದ್ದಾರೆ.ಈ ವೇಳೆ ಪತಿ ಪ್ರವೀಣ್ ಶೆಟ್ಟಿ ತೀರ್ಥ ಅವರಿಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ. 5 ಲಕ್ಷ ರೂಪಾಯಿ ಪರದಕ್ಷಿಣೆ ತರಬೇಕು ಇಲ್ಲವೆಂದಾದರೆ ಮನೆಯಿಂದ ಹೊರಗೆ ಹಾಕೋದಾಗಿ ಬೆದರಿಸುತ್ತಿದ್ದದ್ದು ಅಲ್ಲಗೇ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ,ಆದರೆ ಭಯದಿಂದ ತೀರ್ಥ ಅವರು ಈ ವಿಷಯವನ್ನು ಯಾರಲ್ಲೂ ತಿಳಿಸಿರಲಿಲ್ಲ.
ಇನ್ನು ಮದುವೆಯ ಸಮಯದಲ್ಲಿ ತೀರ್ಥ ಅವರಿಗೆ ತಾಯಿ ಮನೆಯಿಂದ 2 ಲಕ್ಷ ಹಣ ಹಾಗೂ 15 ಪವನ್ ಚಿನ್ನಾಭರಣವನ್ನು ನೀಡಲಾಗಿತ್ತು. ಅದನ್ನು ಪಡೆದುಕೊಂಡ ಪತಿ ಆರೋಪಿ ಪ್ರವೀಣ್ ಶೆಟ್ಟಿ ಇನ್ನೂ ಹಣ ತರುವಂತೆ ದಿನಾಂಕ 03.05.2022 ರಂದು ಬೆಳಿಗ್ಗೆ 08.00 ಗಂಟೆಗೆ ಏಕಾಏಕಿ ಬಂದು ಬೆಲ್ಟ್ ನಿಂದ ತೀರ್ಥ ಅವರಿಗೆ ಬೆನ್ನಿಗೆ ಭುಜಕ್ಕೆ, ಕೈ ಕಾಲುಗಳಿಗೆ ಹೊಡೆದು, ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದ್ದಾನೆ, ವಿಚಾರ ತಿಳಿದ ನೆರೆಹೊರೆಯವರು ತೀರ್ಥ ಅವರನ್ನು ಉಪಚರಿಸಿದ್ದಾರೆ. ಬಳಿಕ ತಮ್ಮ ಅಣ್ಣನಿಗೆ ಕರೆ ಮಾಡಿ ತಿಳಿಸಿ, ತೀರ್ಥ ಅವರನ್ನು ಹುಬ್ಬಳ್ಳಿಯಿಂದ ಬೆಳ್ತಂಗಡಿಗೆ ಕರೆದುಕೊಂಡು ಬಂದು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ, ಸದ್ಯ ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.