ಪಡುಬಿದ್ರಿ: ಕಂಪೆನಿಯೊಂದರ ಕಸವನ್ನು ಖಾಸಗಿ ಜಾಗದಲ್ಲಿ ಸುರಿದ ವ್ಯಕ್ತಿಗೆ ಎಲ್ಲೂರು ಗ್ರಾಮ ಪಂಚಾಯಿತಿಯು ಎರಡು ದಿನದೊಳಗೆ ತೆರವುಗೊಳಿಸಲು ಮತ್ತು ₹5 ಸಾವಿರ ದಂಡ ಪಾವತಿಸಲು ಆದೇಶಿಸಿದೆ. ತಪ್ಪಿದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದೆ.
ಎಲ್ಲೂರು ಗ್ರಾಮ ಪಂಚಾಯಿತಿ ಸದಸ್ಯ ರವಿರಾಜ್ ಅವರ ಪಟ್ಟಾ ಜಾಗಕ್ಕೆ 2 ಲೋಡ್ ಕಸವನ್ನು ಸುರಿಯಲಾಗಿತ್ತು. ಈ ಬಗ್ಗೆ ಮಾಹಿತಿ ಕಲೆಹಾಕಿದಾಗ ಇದನ್ನು ಬೆಳಪುವಿನ ರಝಾಕ್ ಸುರಿದಿರುವುದು ಬೆಳಕಿಗೆ ಬಂತು.
ಇನ್ನಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಬ್ರೈಟ್ ಕಂಪನಿ ಘನ ತ್ಯಾಜ್ಯವನ್ನು ತೆರವುಗೊಳಿಸಲು ಬೆಳಪುವಿನ ರಝಾಕ್ ಅವರಿಗೆ ಗುತ್ತಿಗೆ ನೀಡಿದೆ. ಗುತ್ತಿಗೆ ಪಡೆದ ರಝಾಕ್ ಆ ಕಸವನ್ನು ಖಾಲಿ ಜಾಗದಲ್ಲಿ ಸುರಿದು ಹೋಗಿದ್ದರು. ಎಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜಯಂತ್ ಕುಮಾರ್ ಕಸವನ್ನು ನೀಡಿದ ಕಂಪನಿಯ ಅಧಿಕಾರಿಗಳನ್ನು ಮತ್ತು ಕಸ ಸುರಿದ ರಝಾಕ್ ಅವರನ್ನು ಸ್ಥಳಕ್ಕೆ ಕರೆಯಿಸಿ ₹5 ಸಾವಿರ ದಂಡ ವಿಧಿಸಿದರು.