ಮಂಗಳೂರು: ವರ್ಕ್ಶಾಪ್ವೊಂದರ ಮೇಲ್ಛಾವಣಿಯಿಂದ ಬಿದ್ದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಮಂಗಳೂರಿನ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಗುರುವಾರ ನಡೆದಿದೆ.
ಮಂಗಳೂರಿನ ಎಕ್ಕೂರುಗುಡ್ಡೆ ನಿವಾಸಿ ವರುಣ್(25) ಮೃತ ದುರ್ದೈವಿ. ವರುಣ್ ನಿನ್ನೆ ಸಂಜೆ 5 ಗಂಟೆಯ ಸುಮಾರಿಗೆ ವರ್ಕ್ಶಾಪ್ನ ಮೇಲ್ಛಾವಣಿಯ ಶೀಟ್ ಮೇಲೆ ಸೋಲಾರ್ ಪ್ಯಾನಲ್ಗೆ ವಯರಿಂಗ್ ಮತ್ತು ಪ್ಲಂಬಿಂಗ್ ಕೆಲಸ ಮಾಡುತ್ತಿದ್ದರು.
ಈ ವೇಳೆ ಶೀಟ್ ತುಂಡಾಗಿ ವರುಣ್ ಅವರು ಕೆಳಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿತ್ತು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮೃತಪಟ್ಟಿದ್ದಾರೆ. ಇನ್ನು ಸುರಕ್ಷತೆ ನಿರ್ಲಕ್ಷ್ಯದ ಬಗ್ಗೆ ಗುತ್ತಿಗೆದಾರರ ವಿರುದ್ಧ ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ವರುಣ್ ಅವರು ತಾಯಿ ಮತ್ತು ಇಬ್ಬರು ತಮ್ಮಂದಿರೊಂದಿಗೆ ವಾಸವಾಗಿದ್ದರು. ಓರ್ವ ತಮ್ಮ ಬೇಕರಿ ಕೆಲಸಕ್ಕೆ ಹೋಗುತ್ತಿದ್ದು ಇನ್ನೋರ್ವ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ವರುಣ್ ಬಿಜೆಪಿಯ ಎಕ್ಕೂರು ಬೂತ್ ಕಾರ್ಯದರ್ಶಿಯಾಗಿಯೂ ಕ್ರಿಯಾಶೀಲರಾಗಿದ್ದರು. ವರುಣ್ ನಿಧನಕ್ಕೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.