ತುಮಕೂರು: 45 ವರ್ಷದ ವ್ಯಕ್ತಿಯೊಬ್ಬರನ್ನು 25 ವರ್ಷದ ಯುವತಿ ಮದುವೆಯಾದ ಸುದ್ದಿ ಕಳೆದ ಕೆಲವು ತಿಂಗಳುಗಳ ಹಿಂದೆ ರಾಜ್ಯದಾದ್ಯಂತ ಸುದ್ದಿ ಮಾಡಿತ್ತು. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಅಕ್ಕಿಮರಿಪಾಳ್ಯದ 45 ವರ್ಷದ ಶಂಕರಣ್ಣ ಎಂಬುವವರು 25 ವರ್ಷದ ಮೇಘನಾ ಅವರನ್ನು ವರಿಸಿದ್ದರು. ಇದೀಗ ಶಂಕರಣ್ಣ ತಮ್ಮ ತೋಟದಲ್ಲಿ ನೇಣಿಗೆ ಶರಣಾಗಿದ್ದಾರೆ.
6 ತಿಂಗಳ ಹಿಂದೆ ಶಂಕರಣ್ಣ ಹಾಗೂ ಮೇಘನಾ ಮದುವೆ ನಡೆದಿತ್ತು. ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗದಲ್ಲಿ ಶಂಕರಣ್ಣ ಹಾಗೂ ಮೇಘನಾ ಮದುವೆ ನಡೆದಿತ್ತು. ಇಂದು ಬೆಳಗ್ಗೆ ತೋಟದಲ್ಲಿ ನೇಣುಬಿಗಿದುಕೊಂಡು ಶಂಕರಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಯಸ್ಸಿನಲ್ಲಿ ತನಗಿಂತ 20 ವರ್ಷ ಚಿಕ್ಕ ಯುವತಿಯನ್ನು ಮದುವೆಯಾಗಿದ್ದರು ಶಂಕರಣ್ಣ. ಯುವತಿ ಜೊತೆಗೆ ಸರಳವಾಗಿ ಮದುವೆ ಆಗಿದ್ದರು. ಮದುವೆ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.
ಇನ್ನು ಆತ್ಮಹತ್ಯೆಗೂ ಮುನ್ನ ಶಂಕರಣ್ಣ ಡೆತ್ ನೋಟ್ ಬರೆದಿಟ್ಟಿದ್ದಾರೆ. ಮದುವೆಯಾದ ಬಳಿಕ ಮೇಘನಾ ಊರನ್ನ ಖಾಲಿ ಮಾಡಿ ಬೇರೆಡೆ ಸೆಟ್ಲ್ ಆಗುವಂತೆ ಒತ್ತಾಯ ಮಾಡ್ತಿದ್ದಳು. ಬೆಂಗಳೂರು ಅಥವಾ ಮೈಸೂರಿಗೆ ಹೋಗೊಣ ಎಂದು ಒತ್ತಾಯ ಮಾಡ್ತಿದ್ದಳು. ಪ್ರತಿದಿನ ಅತ್ತೆಯೊಂದಿಗೆ ಗಲಾಟೆ ಮಾಡುತ್ತಿದ್ದಳಂತೆ. ಈ ಬಗ್ಗೆ ಎಷ್ಟು ಬಾರಿ ಆಕೆಗೆ ಬುದ್ಧಿ ಹೇಳಿದರೂ ಆಕೆ ಕೇಳುತ್ತಿರಲಿಲ್ಲವಂತೆ. ಇದರಿಂದ ಮನನೊಂದು ಶಂಕರಣ್ಣ ಹಲಸಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಲಿಯೂರು ದುರ್ಗ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.