ಕಡಬ : ತಾನು ಕೇಳಿದಾಗ ಮನೆಯವರು ಬೈಕ್ ಕೊಡಲಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬ ಇಲಿಪಾಷಾಣ ಸೇವಿಸಿ, ಚಿಕಿತ್ಸೆ ಸಾವನ್ನಪ್ಪಿರುವ ಘಟನೆ ಕಡಬ ತಾಲೂಕಿನ ಬಿಳಿನೆಲೆಯಲ್ಲಿ ನಡೆದಿದೆ. ಬಿಳಿನೆಲೆ ಗ್ರಾಮ ಸೂಡ್ಲು ನಿವಾಸಿ ದುಗ್ಗಪ್ಪ ಗೌಡರ ಪುತ್ರ ಪ್ರಸಾದ್ ಮೃತ ದುರ್ದೈವಿ.
ಕೈಕಂಬದಲ್ಲಿ ಶಾಮಿಯಾನ್ ಸರ್ವಿಸ್ ಹೊಂದಿದ್ದ ಪ್ರಸಾದ್, ಅದನ್ನು ಮತ್ತೋರ್ವರಿಗೆ ಮಾರಾಟ ಮಾಡಿ ಮನೆಯಲ್ಲೇ ಇದ್ದರು. ಕೆಲ ದಿನಗಳ ಹಿಂದೆ ಕಡಬದ ಅಂಗಡಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದರಿಂದ ಓಡಾಡಲು ಬೈಕ್ ಬೇಕೆಂದು ಮನೆಯಲ್ಲಿದ್ದ ಹಳೆಯ ಬೈಕ್ ನ್ನು , ತನಗೆ ನೀಡುವಂತೆ ಪ್ರಸಾದ್ ಮನೆಯವರಲ್ಲಿ ಕೇಳಿದ್ದಾರೆ.
ಆದರೆ ಇನ್ಶುರೆನ್ಸ್ ಅವಧಿ ಕಳೆದಿದ್ದರಿಂದ ಎರಡು ದಿನಗಳ ಕಾಲ ಕಾಯುವಂತೆ ಮನೆಯವರು ಪ್ರಸಾದ್ ಗೆ ಹೇಳಿದ್ದಾರೆ. ಆದರೆ ಬೈಕ್ ನೀಡದ ಸಿಟ್ಟಿನಲ್ಲಿ ಎಲ್ಲರ ಮುಂದೆಯೇ ಮನೆಯಲ್ಲಿದ್ದ ಇಲಿಪಾಷಾಣ ಸೇವಿಸಿದ್ದಾರೆ. ಕೂಡಲೇ ಮನೆಯವರು ತಡೆಯಲು ಯತ್ನಿಸಿದ್ದರೂ ಪ್ರಸಾದ್ ಯಾರನ್ನೂ ಮುಟ್ಟಲು ಬಿಟ್ಟಿರಲಿಲ್ಲ ಎನ್ನಲಾಗಿದೆ.
ಕೊನೆಗೂ ಪುತ್ತೂರಿನ ಆಸ್ಪತ್ರೆಯೊಂದರಲ್ಲಿ ಎರಡು ದಿನಗಳ ಕಾಲ ಚಿಕಿತ್ಸೆ ನೀಡಿ, ಬಳಿಕ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.