ಪುತ್ತೂರು:ರೈಲ್ವೇ ಹಳಿಯಲ್ಲೇ ಮಲಗಿ ಭರ್ಜರಿಯಾಗಿ ವಿಶ್ರಾಂತಿ ಪಡೆಯುತ್ತಿದ್ದ ವ್ಯಕ್ತಿಯೊಬ್ಬನನ್ನು ರೈಲ್ವೇ ಪೊಲೀಸರು ಬಂಧಿಸಿ ದಂಡ ವಿಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಘಟನೆ ಅ.27ರಂದು ಪುತ್ತೂರಿನಲ್ಲಿ ನಡೆದಿದೆ.
ಪಡ್ಡಾಯೂರು ನಿವಾಸಿ ಕೂಲಿ ಕಾರ್ಮಿಕ ದಿನೇಶ್ ಬಂಧಿತ ವ್ಯಕ್ತಿ. ಅ.25ರಂದು ರಾತ್ರಿ ಮುರ ರೈಲ್ವೇ ಹಳಿಯಲ್ಲಿ ಮಲಗಿ ಫುಲ್ ರೆಸ್ಟ್ ಮೂಡಿನಲ್ಲಿದ್ದ. ಈ ವೇಳೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಪ್ಯಾಸೆಂಜರ್ ರೈಲು ಬಂದಿದೆ. ಇದನ್ನು ಗಮನಿಸಿದ ಸ್ಥಳೀಯರು ಆತನನ್ನು ಎಚ್ಚರಿಸಿ ರೈಲ್ವೇ ಹಳಿಯಿಂದ ಬದಿಗೆ ಸರಿಸಿದ್ದರು. ಬಳಿಕ ಇದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು.
ಸಾಮಾಜಿಕ ಕಾರ್ಯಕರ್ತರೊಬ್ಬರು ಘಟನೆಯ ಕುರಿತು ರೈಲ್ವೇ ಸೇವಾ ಕೇಂದ್ರಕ್ಕೆ ಟ್ವೀಟ್ ಮಾಡಿದ್ದರು. ತಕ್ಷಣ ಕಾರ್ಯಪ್ರವೃತರಾದ ರೈಲ್ವೇ ಪೊಲೀಸರು ಮುರಕ್ಕೆ ಬಂದು ವಿಚಾರಣೆ ನಡೆಸಿ ರೈಲ್ವೆ ಹಳಿಯಲ್ಲಿ ಮಲಗಿದ್ದ ವ್ಯಕ್ತಿಯನ್ನು ಬಂಧಿಸಿದ್ದರು. ರೈಲ್ವೇ ಸೊತ್ತಿನಲ್ಲಿ ಅಕ್ರಮವಾಗಿ ಪ್ರವೇಶಿಸಿದಲ್ಲದೆ ದುರುಪಯೋಗ ಪಡಿಸಿಕೊಂಡ ಬಗ್ಗೆ ಪ್ರಕರಣ ದಾಖಲಿಸಿ ರೈಲ್ವೇ ಆಕ್ಟ್ ಪ್ರಕಾರ ದಂಡ ವಿಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.