ಚಿಕ್ಕಮಗಳೂರು: ಅಪ್ರಾಪ್ತ ಬಾಲಕಿಯನ್ನ ಅನ್ಯಕೋಮಿನ ಯುವಕ ಪ್ರೀತಿ ಹೆಸರಲ್ಲಿ ಅಪಹರಣ ಮಾಡಿದ್ದಾನೆಂದು ಬಾಲಕಿ ತಂದೆ ದೂರು ನೀಡಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನಲ್ಲಿ ನಡೆದಿದೆ.
ಅಜ್ಜಂಪುರ ತಾಲೂಕಿನ ದಂದೂರು ಮೂಲದ ಅಪ್ರಾಪ್ತ ಬಾಲಕಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿ ಪ್ಯಾರಾಮೆಡಿಕಲ್ ಓದುತ್ತಿದ್ದಳು. ಈ ವೇಳೆ ಆಕೆ ಅಲ್ಲಿ ಅಫ್ರೋಜ್ ಎಂಬ ಯುವಕನ ಜೊತೆ ಓಡಾಡುತ್ತಿದ್ದಾಳೆಂದು ಬಾಲಕಿ ಹೆತ್ತವರಿಗೆ ಗೊತ್ತಾಗಿದೆ. ಹೆತ್ತವರು ಆಕೆಯನ್ನ ಕಾಲೇಜು ಬಿಡಿಸಿ ಮನೆಗೆ ಕರೆತಂದು ಸಂಬಂಧಿಕರ ಮನೆಗೆ ಬಿಟ್ಟಿದ್ದರು. ಕಳೆದ 3 ತಿಂಗಳಿಂದ ಬಾಲಕಿ ಸಂಬಂಧಿಕರ ಮನೆಯಲ್ಲೇ ಇದ್ದಳು. ಆದರೆ, ಬಾಲಕಿ ಇದ್ದ ಮನೆಯವರ ಸಂಬಂಧಿಗಳು ಸಾವನ್ನಪ್ಪಿದ ಹಿನ್ನೆಲೆ ಮನೆಯಲ್ಲಿ ಆಕೆ ಜೊತೆ ಬೇರೊಬ್ಬರನ್ನ ಬಿಟ್ಟು ದೋರನಾಳು ಗ್ರಾಮಕ್ಕೆ ಹೋಗಿದ್ದರು.
ಈ ವೇಳೆ ಅಪ್ರಾಪ್ತ ಬಾಲಕಿಯನ್ನ ಪ್ರೀತಿ ಹೆಸರಲ್ಲಿ ಅಫ್ರೋಜ್ ಎಂಬ ಯುವಕ ಅಪಹರಣ ಮಾಡಿದ್ದಾನೆಂದು ಆರೋಪಿಸಿ ಬಾಲಕಿಯ ಹೆತ್ತವರು ಅಜ್ಜಂಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಆರೋಪಿ ಅಫ್ರೋಜ್ನನ್ನು ಬಂಧಿಸಿದ್ದಾರೆ. ಆತನನ್ನು ಚಿಕ್ಕಮಗಳೂರು ಪೋಕ್ಸೋ ಕೋರ್ಟ್ಗೆ ಹಾಜರು ಪಡಿಸಿದ್ದಾರೆ ಎಂದು ತಿಳಿಯಲಾಗಿದೆ.