ಸುಬ್ರಮಣ್ಯ; ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪಂಚ ಪರ್ವ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ 27 ಜನ ಮಲೆಕುಡಿಯರಿಗೆ ತಿಂಗಳ ವೇತನ ನೀಡದೇ ಏಕಾಏಕಿ ಕೆಲಸದಿಂದ ವಜಾ ಮಾಡಿದ್ದನ್ನು ಖಂಡಿಸಿ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ವಿರುದ್ಧ ಮೇ.4 ರಂದು ಸಾಂಕೇತಿಕ ಪ್ರತಿಭಟನೆ ನಡೆಯಿತು.
ದೇವಸ್ಥಾನದಲ್ಲಿ ಪಂಚ ಪರ್ವ ವಿಭಾಗದಲ್ಲಿ ಕಳೆದ ಎರಡೂವರೆ ವರ್ಷದಿಂದ ರಥ ಕಟ್ಟುವುದು, ಪರ್ವ ಸೇವೆ ಸೇರಿ ಹಲವು ಕೆಲಸಗಳನ್ನು 27 ಜನ ಮಲೆಕುಡಿಯರು ಮಾಡುತ್ತಿದ್ದರು. ಇವರಿಗೆ ಎರಡು ತಿಂಗಳ ವೇತನ ಕೂಡ ನೀಡದೇ ಏಕಾಏಕಿ ಕೆಲಸದಿಂದ ವಜಾ ಮಾಡಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ.
ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿಯ ನಡೆಯನ್ನು ಖಂಡಿಸಿ, ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತ ಪಡಿಸಿ, ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ವಿರುದ್ಧ ಸಾಂಕೇತಿಕ ಪ್ರತಿಭಟನೆ ನಡೆಸಿದ್ದಾರೆ. ಬಳಿಕ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಅವರ ಬಳಿ ತೆರಳಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿ, ಎರಡು ದಿನಗಳ ಒಳಗೆ ಕೆಲಸಕ್ಕೆ ನೇಮಿಸದೇ ಇದ್ರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮನವಿ ಹಿನ್ನೆಲೆಯಲ್ಲಿ ಕಾರ್ಯನಿರ್ವಾಹಣಾಧಿಕಾರಿಗೆ ಸೂಚಿಸಿ ವಜಾ ಮಾಡಿರುವ ಮಲೆಕುಡಿಯರನ್ನು ಕೆಲಸಕ್ಕೆ ನೇಮಿಸುವುದಾಗಿ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ ಅವರು ಭರವಸೆಯನ್ನು ನೀಡಿರುವುದಾಗಿ ತಿಳಿದುಬಂದಿದೆ. ಕಾರ್ಯನಿರ್ವಹಣಾಧಿಕಾರಿ ದೇವಸ್ಥಾನದಲ್ಲಿ ಇರದ ಕಾರಣ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಪುಷ್ಪಲತ ಅವರಿಗೆ ಮನವಿ ನೀಡಲಾಗಿದೆ.