ಮಂಗಳೂರು: ವಿಶ್ವಹಿಂದೂ ಪರಿಷತ್ ಕಾರ್ಯಕರ್ತರು ಉಳ್ಳಾಲದ ಮಾಜಿ ಶಾಸಕ ದಿ.ಬಿ.ಎಂ.ಇದಿನಬ್ಬ ಅವರ ಮನೆ ಮೇಲೆ ಮುತ್ತಿಗೆ ಹಾಕಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಚಿವ ಯು. ಟಿ. ಖಾದರ್ ಹಿಂದೂ ಪರ ಸಂಘಟನೆಗಳ ನಡೆಯನ್ನು ಖಂಡಿಸಿದ್ದಾರೆ.
ಹಿಂದೂ ಸಂಘಟನೆಗಳ ಪ್ರತಿಭಟನೆಯ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಯು.ಟಿ. ಖಾದರ್,ಮಡಿಕೇರಿ ಮೂಲದ ಬಂಟ ಸಮುದಾಯದ ಯುವತಿ ಮರಿಯಮ್ ಆಲಿಯಾಸ್ ದೀಪ್ತಿ ಮಾರ್ಲ ಎಂಬಾಕೆಯನ್ನು ಇದ್ದಿನಬ್ಬರ ಮೊಮ್ಮಗ ಲವ್ ಜಿಹಾದ್ ನಡೆಸಿ ವಿವಾಹ ಮಾಡಲಾಗಿದ್ದು, ದೀಪ್ತಿ ಮಾರ್ಲ ಸೇರಿ ಇಡೀ ಕುಟುಂಬದ ವಿರುದ್ಧ ತನಿಖೆ ನಡೆಸಬೇಕು ಎಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸಿತ್ತು. ಈ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ಯು. ಟಿ. ಖಾದರ್ ಆ ಮನೆಯ ಯುವತಿಯ ಬಗ್ಗೆ ಕೇಳೋಕೆ ಈ ಸಂಘಟನೆಯವರು ಯಾರು? ಅವರ ತಂದೆ ತಾಯಿ ಬಂದು ಏನಾದ್ರೂ ಪೊಲೀಸರಿಗೆ ದೂರು ನೀಡಿದ್ದಾರೆಯೇ? ಇದು ಅವರ ಮನೆಯವರಿಗೆ ಬಿಟ್ಟ ವಿಚಾರ. ನನ್ನ ಉಳ್ಳಾಲ ಕ್ಷೇತ್ರಕ್ಕೆ ಬಂದು , ಲವ್ ಜಿಹಾದ್ ಎನ್ನುವ ಅಜೆಂಡಾ ಇಟ್ಟು ಪ್ರತಿಭಟನೆ ಮಾಡುತ್ತೀರಿ ನಿಮಗೆ ಸಾಧ್ಯವಾದರೆ ಲವ್ ಜಿಹಾದ್ ವಿರುದ್ದ ಕಾನೂನು ತರಲು ಉಪವಾಸ ಮಾಡಿ ಎಂದು ಸವಾಲೆಸೆದಿದ್ದಾರೆ.
ನಿಮಗೆ ಬದ್ಧತೆ ಇದ್ದರೆ ಬಿಜೆಪಿ ಕಚೇರಿ ಮುಂದೆ ಲವ್ ಜಿಹಾದ್ ಕಾನೂನು ತರಲು ನಾಳೆಯಿಂದ ಪ್ರತಿಭಟಿಸಿ. ಈ ಸಂಘಟನೆಯವರ ಬಣ್ಣ ಮೊದಲು ಬಯಲಾಗಬೇಕು. ಮನೆಯಲ್ಲಿ ಕಷ್ಟ ಇದ್ದರೆ, ಫೀಸ್ ಕಟ್ಟುವುದಕ್ಕೆ ಆಗದೆ ಇದ್ದರೆ ಇವರ ಕಚೇರಿಯನ್ನು ಸಂಪರ್ಕಿಸಿ. ಈ ಜಾತಿ ಪ್ರೇಮ, ಸಮುದಾಯ ಪ್ರೇಮ, ಧರ್ಮ ಪ್ರೇಮ ಇರುವ ಎಲ್ಲರನ್ನೂ ಸಂಪರ್ಕಿಸಿ ಸಹಾಯ ಕೇಳಿ. ಆಗ ಇವರು ಎಷ್ಟು ನೆರವು ಕೊಡುತ್ತಾರೆ ಅನ್ನೋದನ್ನು ನೋಡೋಣ, ಎಂದು ಯು.ಟಿ. ಖಾದರ್ ಸವಾಲು ಎಸೆದರು.
ಇವತ್ತು ಉಳ್ಳಾಲ ವ್ಯಾಪ್ತಿಯಲ್ಲಿ ಮಾತ್ರ ಭಯೋತ್ಪಾದನೆ ಚಟುವಟಿಕೆ ನಡೆಯುತ್ತಿಲ್ಲ. ಇಲ್ಲಿನ ಜನರು ಪರಸ್ಪರ ಭಾವೈಕ್ಯತೆ ಮತ್ತು ಪ್ರೀತಿಯಿಂದ ಬದುಕುತ್ತಿದ್ದಾರೆ. ಎನ್ ಐ ಎ ತನಿಖೆ ನಡೆಯುತ್ತಿರುವಾಗ ಹೇಳಿಕೆ ನೀಡುವುದು ಸರಿಯಲ್ಲ. ಎನ್ ಐಎ ಬಂದಿರೋದು ಗಂಭೀರ ವಿಚಾರ, ಈ ಬಗ್ಗೆ ಸಮಗ್ರ ತನಿಖೆ ನಡೆಯಲಿ. ಈ ಬಗ್ಗೆ ರಾಜಕೀಯ ಮಾಡುವುದು ಬೇಡ ಎಂದು ಹೇಳಿದ್ದಾರೆ.
ಇನ್ನು ಮಂಗಳೂರಿನಲ್ಲಿ ಎನ್ಐಎ ಘಟಕ ಸ್ಥಾಪನೆ ಆಗುವ ವಿಚಾರವಾಗಿ ಮಾತನಾಡಿದ ಯು.ಟಿ. ಖಾದರ್, ಎನ್ಐಎ ಘಟಕ ಮಂಗಳೂರಿನಲ್ಲಿ ಆಗಲಿ, ಅದು ಸಂತೋಷದ ವಿಚಾರ. ಅದರ ಜೊತೆಗೆ ನಾರ್ಕೋಟೀಕ್ ಮತ್ತು ಸೈಬರ್ ಸೆಲ್ ಕೂಡ ಆಗಲಿ ಎಂದು ಖಾದರ್ ಒತ್ತಾಯಿಸಿದ್ದಾರೆ.