
ಮಂಗಳೂರು: ಮನೆಯ ಕಾಮಗಾರಿ ಕೆಲಸಕ್ಕಾಗಿ ಬಂದು ಸುಮಾರು 6.37 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ವಾಚ್ ಕಳವು ಮಾಡಿದ್ದ ಆರೋಪಿಯನ್ನು ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಕೇವಲ 24 ಗಂಟೆಯೊಳಗೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಉತ್ತರ ಪ್ರದೇಶದ ಬಲರಾಮ್ಪುರ ಮೂಲದ, ಪ್ರಸ್ತುತ ಮಂಗಳೂರಿನ ಬಂದರು ಅಜಿಜುದ್ದೀನ್ ರಸ್ತೆಯಲ್ಲಿ ವಾಸವಿದ್ದ 24 ವರ್ಷದ ಜಹೀರುದ್ದೀನ್ ಬಂಧಿತ ಆರೋಪಿಯಾಗಿದ್ದಾನೆ.
ಇತ್ತೀಚೆಗೆ ಮಂಗಳೂರಿನ ಮೇರಿಹಿಲ್ ಬಾಂದೋಟ್ಟು ಎಂಬಲ್ಲಿನ ಮನೆಯೊಂದರಲ್ಲಿ ಛಾವಣಿ ಮತ್ತು ಫಾಲ್ಸ್ ಸೀಲಿಂಗ್ ಕಾಮಗಾರಿ ನಡೆಯುತ್ತಿದ್ದಾಗ, ಟೇಬಲ್ ಡ್ರಾವರ್ನಲ್ಲಿ ಇಡಲಾಗಿದ್ದ 49 ಗ್ರಾಂ ತೂಕದ ಚಿನ್ನಾಭರಣಗಳು (ಕಡಗ, ಚೈನ್, ಉಂಗುರಗಳು) ಹಾಗೂ ಒಂದು ಸೊನಾಟಾ ಗೋಲ್ಡ್ ಕೋಟೆಡ್ ವಾಚ್ ಕಳುವಾಗಿದ್ದವು.
ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಇನ್ಸ್ಪೆಕ್ಟರ್ ಡಿ.ಆರ್. ಮಂಜಪ್ಪ, ಸಬ್ ಇನ್ಸ್ಪೆಕ್ಟರ್ ಅರುಣ್ ಕುಮಾರ್ ಡಿ. ಹಾಗೂ ಅವರ ತಂಡವು ಕೆಲಸಗಾರರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಪೊಲೀಸರು ಕಳುವಾಗಿದ್ದ ಎಲ್ಲಾ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.


