ಮಣಿಪಾಲ: ಅಂಬಾಗಿಲು ಮಣಿಪಾಲ ಚತುಷ್ಫತ ರಸ್ತೆ ಮಧ್ಯೆಯೇ ಮಹಾಗೋಡೆಯೊಂದಿದೆ. ಈ ಮಹಾಗೋಡೆಯಿಂದ ಯಾವಾಗ ಬೇಕಾದ್ರೂ ಅನಾಹುತ ಸಂಭವಿಸಬಹುದು. ಹಾಗಾಗಿ ಈ ಗೋಡೆ ಕೆಡವಲು ಆಗ್ರಹ ಕೇಳಿಬರ್ತಿದೆ. ಆದ್ರೆ ಗೋಡೆ ಕೆಡವಲು ಭಾರತ ಆಹಾರ ನಿಗಮ ಅಡ್ಡಿಯಾಗಿದೆ.
ಹೌದು ,ಮಣಿಪಾಲ ಅಂಬಾಗಿಲು ಚತುಷ್ಫತ ರಸ್ತೆ ನಿರ್ಮಾಣ ಕಾರ್ಯ ಕೆಲವು ವರ್ಷಗಳಿಂದ ನಡೆಯುತ್ತಿತ್ತು. ಇದೀಗ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಮಣಿಪಾಲ ಅಂಬಾಗಿಲು ಮಧ್ಯದ ಪೆರಂಪಳ್ಳಿ ಸಮೀಪ ಭಾರತೀಯ ಆಹಾರ ನಿಗಮ ಇದೆ. ಆಹಾರ ನಿಗಮದವರು ,ಚತುಷ್ಪತ ರಸ್ತೆ ನಿರ್ಮಾಣಕ್ಕೆ ಕಾಂಪೌಂಡ್ ವಾಲ್ ನ್ನು ಬಿಟ್ಟು ಕೊಡುತ್ತಿಲ್ಲ ಎಂಬುದೇ ಆಶ್ಚರ್ಯದ ಸಂಗತಿ.
ಈ ಚತುಷ್ಪತ ನಿರ್ಮಾಣಕ್ಕೆ ಚರ್ಚ್ ಮತ್ತು ಮಸೀದಿ ಜಾಗವನ್ನು ಬಿಟ್ಟು ಕೊಡಲಾಗಿತ್ತು. ಎರಡೂ ಕಡೆಯ ಮನೆಯವರೂ ತಮ್ಮ ಜಾಗವನ್ನು ಬಿಟ್ಟು ಕೊಟ್ಟಿದ್ದಾರೆ. ಆದರೆ ಆಹಾರ ನಿಗಮದವರು ಜಮೀನು ಬಿಡಲು ಒಪ್ಪದ ಕಾರಣ ,ರಸ್ತೆ ಮಧ್ಯೆಯೇ ಗೋಡೆ ಬಂದಿದೆ. ಮಣಿಪಾಲದಿಂದ ಇಳಿಜಾರು ರಸ್ತೆ ಮೂಲಕ ಪೆರಂಪಳ್ಳಿಗೆ ಹೋಗುವ ಜನರು ಸ್ವಲ್ಪ ಮೈಮರೆತರೂ ಇಲ್ಲಿ ಅಪಾಯ ಕಟ್ಟಿಟ್ಡ ಬುತ್ತಿ.ರಾತ್ರಿ ವೇಳೆ ಇಲ್ಲಿ ಬೆಳಕೂ ಇಲ್ಲದ ಕಾರಣ ,ಈ ಮಹಾಗೋಡೆಗೆ ವಾಹನಗಳು ಡಿಕ್ಕಿ ಹೊಡೆದು ಅನಾಹುತ ಸಂಭವಿಸುವ ಸಾಧ್ಯತೆಗಳಿವೆ. ಇದನ್ನು ತಕ್ಷಣ ತೆರವುಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.