ಭೋಪಾಲ್ : ಮಹಾರಾಷ್ಟ್ರದ ಔರಂಗಬಾದ್ ಬಳಿ ರೈಲ್ವೆ ಹಳಿ ಮೇಲೆ ಮಲಗಿದ್ದ ಮಧ್ಯಪ್ರದೇಶದ ವಲಸೆ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದು ದುರ್ಘಟನೆ ಸಂಭವಿಸಿದೆ. ದುರಂತದಲ್ಲಿ ಸಾವನ್ನಪ್ಪಿದ ದುರ್ದೈವಿಗಳ ಕುಟುಂಬಕ್ಕೆ ಮಧ್ಯಪ್ರದೇಶ ಸರ್ಕಾರ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ.
ಲಾಕ್ಡೌನ್ನಿಂದ ಮಹಾರಾಷ್ಟ್ರದಲ್ಲಿ ಸಿಲುಕಿಕೊಂಡಿದ್ದ ಮಧ್ಯಪ್ರದೇಶದ ಕಾರ್ಮಿಕರು ತಮ್ಮ ಊರಿಗೆ ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳೆಸಿದ್ದರು. ಈ ವೇಳೆ ನಡೆದು ನಡೆದು ಸುಸ್ತಾಗಿದ್ದ ಕಾರ್ಮಿಕರು ವಿಶ್ರಾಂತಿಗಾಗಿ ಕಳೆದ ರಾತ್ರಿ ರೈಲು ಹಳಿಯ ಮೇಲೆ ಮಲಗಿದ್ದರು. ಆರೆ, ಇಂದು ಮುಂಜಾನೆ 5 ಗಂಟೆ ವೇಳೆಗೆ ಜಾಲ್ನಾದಿಂದ ಔರಂಗಾಬಾದ್ನತ್ತ ತೆರಳುತ್ತಿದ್ದ ಗೂಡ್ಸ್ ರೈಲು ಹಳಿಯ ಮೇಲೆ ಮಲಗಿದ್ದ ಕಾರ್ಮಿಕರ ಮೇಲೆ ಹರಿದಿದ್ದು, ಪರಿಣಾಮ 17 ಮಂದಿ ವಲಸೆ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಇದೇ ವೇಳೆ ಐವರ ಸ್ಥಿತಿ ಚಿಂತಾಜನಕವಾಗಿದೆ.
ಜಾಲ್ನಾದಿಂದ 170 ಕಿ.ಮೀ. ದೂರದ ಭುವಸಾಲ್ಗೆ ನಡೆದುಕೊಂಡು ಹೋಗುತ್ತಿದ್ದ ವಲಸೆ ಕಾರ್ಮಿಕರು ಇನ್ನು 45 ಕಿ.ಮೀ. ನಡೆದರೆ ಊರು ಸೇರುತ್ತಿದ್ದರು. ಆದರೆ, ಅಷ್ಟರಲ್ಲೇ ಗೂಡ್ಸ್ ರೈಲು ರೂಪದಲ್ಲಿ ಬಂದಿರುವ ಜವರಾಯ 17 ಮಂದಿಯ ಪ್ರಾಣವನ್ನು ಬಲಿಪಡೆದಿದ್ದಾನೆ. ಘಟನೆಗೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ದಿಗ್ಭ್ರಮೆ ವ್ಯಕ್ತಪಡಿಸಿದ್ದು, ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಪ್ರಕಟಿಸಿದ್ದಾರೆ. ದುರಂತದ ಬಗ್ಗೆ ಸಂಪೂರ್ಣ ತನಿಖೆ ನಡೆಸಲು ರೈಲ್ವೆ ಇಲಾಖೆಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ.
ಇಂದು ಮುಂಜಾನೆ, ಗೂಡ್ಸ್ ರೈಲಿನ ಹಳಿಯ ಮೇಲೆ ಜನರು ಮಲಗಿರುವುದು ರೈಲಿನ ಲೋಕೋ ಪೈಲಟ್ ಗಮನಕ್ಕೆ ಬಂದಿತ್ತು. ತಕ್ಷಣ ಅವರು ರೈಲನ್ನು ನಿಲ್ಲಿಸಲು ಪ್ರಯತ್ನಿಸಿದ್ದರು. ಆದರೆ, ಅದು ಸಾಧ್ಯವಾಗದೆ ರೈಲು ಜನರ ಮೇಲೆ ಹರಿದಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.