ಲಖ್ನೋ: ಕಾನೂನು ರಹಿತ ಮತಾಂತರ, ಬಲವಂತವಾಗಿ ಮತಾಂತರ ಅಥವಾ ಮದುವೆ ಉದ್ದೇಶದಿಂದ ಮತಾಂತರ ಮಾಡುವ ‘ಲವ್ ಜಿಹಾದ್ ‘ ವಿರುದ್ಧ ಕಠಿಣ ಕಾನೂನು ರಚನೆ ಕುರಿತು ಯೋಗಿ ಆದಿತ್ಯನಾಥ್ ಸರ್ಕಾರ ಪ್ರಮುಖ ನಿರ್ಧಾರ ಕೈಗೊಂಡಿದೆ.
ಬಲವಂತವಾಗಿ ಮತಾಂತರದ ವಿರುದ್ಧ ಸುಗ್ರೀವಾಜ್ಞೆ ಹೊರಡಿಸುವ ಕಾನೂನು ರೂಪಿಸಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಸಚಿವ ಸಿದ್ಧಾರ್ಥ್ ನಾಥ್ ಸಿಂಗ್ ಹೇಳಿದರು. ಹೊಸ ನಿಯಮದ ಪ್ರಕಾರ ಕಾನೂನು ಬಾಹಿರ ಮತಾಂತರ ವಿರುದ್ಧ ಸುಗ್ರೀವಾಜ್ಞೆ ಜಾರಿಗೊಳಿಸಲಾಗಿದ್ದು, ಸುಗ್ರೀವಾಜ್ಞೆಯ ಪ್ರಕಾರ, ಬೇರೆ ಧರ್ಮದಲ್ಲಿ ಮದುವೆಯಾಗಲು ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರಲಿದೆ. ಇದಕ್ಕಾಗಿ ಮದುವೆಗೆ ಮೊದಲು 2 ತಿಂಗಳ ನೋಟಿಸ್ ನೀಡಬೇಕು.
ತನ್ನ ಹೆಸರನ್ನು ಮರೆಮಾಚುವ ಮೂಲಕ ಮದುವೆಯಾದ ವ್ಯಕ್ತಿಗೆ 10 ವರ್ಷಗಳ ಶಿಕ್ಷೆ ವಿಧಿಸಲು ಈ ಸುಗ್ರೀವಾಜ್ಞೆಯು ಅವಕಾಶ ನೀಡುತ್ತದೆ. ಇದಲ್ಲದೆ ಅಕ್ರಮ ಮತಾಂತರಕ್ಕೆ ಒಂದರಿಂದ 10 ವರ್ಷಗಳವರೆಗೆ ಶಿಕ್ಷೆ ವಿಧಿಸಲಾಗುತ್ತದೆ. ಅಲ್ಲದೆ, 15 ಸಾವಿರವರೆಗೆ ದಂಡವನ್ನು ಸಹ ಪಾವತಿಸಬೇಕಾಗಬಹುದು. ಇದಲ್ಲದೆ, ನೀವು ಕಾನೂನುಬಾಹಿರ ರೀತಿಯಲ್ಲಿ ಧರ್ಮಕ್ಕೆ ಮತಾಂತರಗೊಂಡರೆ, ನಿಮಗೆ 10 ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದು, ಜೊತೆಗೆ ನಿಮಗೆ 50 ಸಾವಿರವರೆಗೆ ದಂಡ ವಿಧಿಸಲಾಗುವುದು. ಪರಿಶಿಷ್ಟ ಜಾತಿ, ಸಮುದಾಯದ ಅಪ್ರಾಪ್ತ ವಯಸ್ಕರು ಮತ್ತು ಮಹಿಳೆಯರ ಮತಾಂತರಕ್ಕೆ 25 ಸಾವಿರ ರೂಪಾಯಿ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲಾಗುವುದು.