ಮಂಗಳೂರು : ಕರ್ತವ್ಯದ ಸ್ಥಳ ನಿಯೋಜಿಸಲು ಪೇದೆ ಕೈಯಿಂದ 18,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಕೆ.ಎಸ್.ಆರ್.ಪಿ ಪಡೆಯ ಪೊಲೀಸ್ ಇನ್ಸ್ಪೆಕ್ಟರ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಪ್ರಕರಣದ ವಿವರ: ಮಂಗಳೂರಿನ ಅಸೈಗೋಳಿಯಲ್ಲಿನ ಕೆ ಎಸ್ ಆರ್ ಪಿ ಕಚೇರಿಯಲ್ಲಿ ಪೊಲೀಸ್ ಕಾನ್ಸ್ ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯೊಬ್ಬರು KSRP 7ನೇ ಬೆಟಾಲಿಯನ್ನ ಪೊಲೀಸ್ ಅತಿಥಿಗೃಹದ ನಿರ್ವಾಹಕರಾಗಿ ಕರ್ತವ್ಯವಾಗ KSRP 7ನೇ ಬೆಟಾಲಿಯನ್ ಕೊಣಾಜೆ, ಮಂಗಳೂರು ಇಲ್ಲಿನ ಪೊಲೀಸ್ ನಿರೀಕ್ಷಕರಾದ ಮಹಮ್ಮದ್ ಆರಿಸ್ ಎಂಬವರು ಕರ್ತವ್ಯ ನಿರ್ವಹಿಸಬೇಕಾದರೆ ತನಗೆ 20,000/- ರೂ ಗಳನ್ನು ನೀಡಬೇಕೆಂದು ಹಾಗೂ ಪ್ರತಿ ತಿಂಗಳು ತನಗೆ ರೂ 6,000/-ದಂತೆ ಹಣ ನೀಡಬೇಕೆಂದು ದೂರದಾರ ಸಿಬ್ಬಂದಿಗೆ ಬೇಡಿಕೆಯನ್ನು ಸಲ್ಲಿಸಿದ್ದು, ಸದ್ರಿ ಅಧಿಕಾರಿಗೆ ಪ್ರತಿ ತಿಂಗಳು ರೂ. 6,000/- ವನ್ನು ದೂರದಾರ ಸಿಬ್ಬಂದಿ ಲಂಚವಾಗಿ ನೀಡುತ್ತಾ ಬಂದಿದ್ದು, ಈವರೆಗೆ ಒಟ್ಟು 50,000/- ರೂಗಳನ್ನು ಪೊಲೀಸ್ ನಿರೀಕ್ಷಕರಾದ ಮಹಮ್ಮದ್ ಆರೀಸ್ ರವರು ದೂರದಾರ ಸಿಬ್ಬಂದಿಯಿಂದ ಪಡೆದುಕೊಂಡಿದ್ದು, ದೂರದಾರ ಸಿಬ್ಬಂದಿಯ ತಂದೆಯವರ ಅನಾರೋಗ್ಯದ ನಿಮಿತ್ತ 2024ರ ಎಪ್ರಿಲ್ ತಿಂಗಳಿನಿಂದ ಜೂನ್ ತಿಂಗಳವರೆಗಿನ 3 ತಿಂಗಳ ಬಾಯ್ತು ರೂ 18,000/- ಲಂಚವಾಗಿ ಕೊಡಬೇಕಾದ ಹಣವನ್ನು ಪೊಲೀಸ್ ನಿರೀಕ್ಷಕರಾದ ಮಹಮ್ಮದ್ ಆರೀಸ್ರವರಿಗೆ ಕೊಡಲು ದೂರದಾರ ಸಿಬ್ಬಂದಿ ಸಾಧ್ಯವಾಗಿರುವುದಿಲ್ಲ. ದೂರದಾರ ಸಿಬ್ಬಂದಿ 3 ತಿಂಗಳ ಬಾಬು 18,000/- ಹಣವನ್ನು ನೀಡಿಲ್ಲ ಎಂಬುದಾಗಿ ಪ್ರತಿ ದಿನಾಲೂ ಅವರಿಗೆ ಕರೆ ಮಾಡಿ ನೀಡಲು ಬಾಕಿ ಇರುವುದನ್ನು ನೀಡು, ಇಲ್ಲವಾದರೆ ಡ್ಯೂಟಿ ಬದಲಾಯಿಸುತ್ತೇನೆ ಎಂಬುದಾಗಿ ಅವರಿಗೆ ತಿಳಿಸಿ ರೂ 18,000/-ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ.
ಕರ್ನಾಟಕ ಪೊಲೀಸ್ ವಿಶೇಷ ಮೀಸಲು ಪಡೆ 7ನೇ ಬೆಟಾಲಿಯನ್, ಕೊಣಾಜೆ ಮಂಗಳೂರು ಇಲ್ಲಿನ ಪೊಲೀಸ್ ನಿರೀಕ್ಷಕರಾದ ಮಹಮ್ಮದ್ ಆರೀಸ್ ದೂರದಾರ ಸಿಬ್ಬಂದಿಯಿಂದ ರೂ.18,000 (ಹದಿನೆಂಟು ಸಾವಿರ) ಲಂಚದ ಹಣವನ್ನು ಸ್ವೀಕರಿಸುವಾಗ ಜು.10 ರಂದು ಸಂಜೆ ಮಂಗಳೂರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುತ್ತಾರೆ. ಇನ್ನೂ ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದು ಬಳಿಕ ಮಂಗಳೂರು ನ್ಯಾಯಾಲಯಕ್ಕೆ ಲೋಕಾಯುಕ್ತ ಪೊಲೀಸರು ಹಾಜರುಪಡಿಸಲಿದ್ದಾರೆ. ಇನ್ನು ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಹಳೆಪೇಟೆ ನಿವಾಸಿಯಾಗಿದ್ದಾರೆ ಇನ್ಸ್ಪೆಕ್ಟರ್ ಮೊಹಮ್ಮದ್ ಆರೀಸ್.
ಮಂಗಳೂರು ಲೋಕಾಯುಕ್ತ ಎಸ್ಪಿ ಎಂ.ಎ.ನಟರಾಜ ನೇತೃತ್ವದಲ್ಲಿ ಡಿವೈಎಸ್ಪಿ ಡಾ.ಗಾನಾ ಪಿ ಕುಮಾರ್ , ಡಿವೈಎಸ್ಪಿ ಚೆಲುವರಾಜ್, ಇನ್ಸ್ ಪೆಕ್ಟರ್ ಗಳಾದ ಅಮಾನುಲ್ಲಾ.ಎ, ಸುರೇಶ್ ಕುಮಾರ್, ಚಂದ್ರಶೇಖರ್ ಸಿ.ಎಲ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.