Tuesday, June 6, 2023
Homeತಾಜಾ ಸುದ್ದಿಲಾಕ್ ಡೌನ್ ಇನ್ನೂ 2-3 ತಿಂಗಳು ಮುಂದುವರಿದರೂ ಆಶ್ಚರ್ಯ ಪಡಬೇಕಿಲ್ಲ - ಸಿಎಂ ಬಿಎಸ್ವೈ

ಲಾಕ್ ಡೌನ್ ಇನ್ನೂ 2-3 ತಿಂಗಳು ಮುಂದುವರಿದರೂ ಆಶ್ಚರ್ಯ ಪಡಬೇಕಿಲ್ಲ – ಸಿಎಂ ಬಿಎಸ್ವೈ

- Advertisement -
- Advertisement -

ಬೆಂಗಳೂರು : ಆರ್ಥಿಕ ಚಟುವಟಿಕೆ ಆರಂಭ ಮತ್ತು ಕೊರೋನಾ ನಿಯಂತ್ರಣ ಎರಡೂ ಒಟ್ಟೊಟ್ಟಾಗಿ ನಡೆಯಬೇಕಾಗಿದೆ. ಮೇ ನಾಲ್ಕರಿಂದ ಎಲ್ಲಾ ಕಡೆ ಕೈಗಾರಿಕೆಗಳನ್ನು ಪ್ರಾರಂಭಿಸಲು ಕ್ರಮಕೈಗೊಳ್ಳಲಾಗುವುದು. ಇನ್ನೂ ಎರಡ್ಮೂರು ತಿಂಗಳು ಲಾಕ್ ಡೌನ್ ಮುಂದುವರಿದರೂ ಆಶ್ಚರ್ಯಪಡಬೇಕಿಲ್ಲ. ನಾಲ್ಕನೇ ತಾರೀಖಿನ ನಂತರ ಪ್ರಧಾನಿ ಮೋದಿ ಕೆಲವು ಸೂಚನೆಗಳನ್ನು ಕೊಡಲಿದ್ದಾರೆ. ಅದಾದ ಬಳಿಕ ಹಂತ ಹಂತವಾಗಿ ನಿರ್ಬಂಧ ಸಡಿಲಿಕೆ ಮಾಡುವ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ ನಾಲ್ಕರ ನಂತರ ಪ್ರಧಾನಿ ಮೋದಿ ಮತ್ತೆ ಲಾಕ್ ಡೌನ್ ಸಡಿಲಿಕೆ ಬಗ್ಗೆ ತಿಳಿಸಲಿದ್ದಾರೆ. ಕಂಟೈನ್ಮೆಂಟ್ ಜೋನ್ ಹೊರತುಪಡಿಸಿ ಮೇ ನಾಲ್ಕರಿಂದ ಗ್ರೀನ್ ಜೋನ್ ಗಳಲ್ಲಿ ಕಾರ್ಖಾನೆ ಆರಂಭವಾಗಲಿದೆ. ಈ ಬಗ್ಗೆ ಇಂದು ಸಂಜೆ ಪ್ರಮುಖ ಕೈಗಾರಿಕೋದ್ಯಮಿಗಳ ಜತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮಾಲ್ ಗಳನ್ನು ತೆರೆಯುವ ಬಗ್ಗೆ ತೀರ್ಮಾನ ಆಗಿಲ್ಲ. ಮೇ ಮೂರು, ಅಥವಾ ನಾಲ್ಕರ ನಂತರ ತೀರ್ಮಾನ ಕೈಗೊಳ್ಳುತ್ತೇವೆ. ನಮಗೆ ಅನುಕೂಲಕರ ವಾತಾವರಣ ನಿರ್ಮಾಣವಾಗುತ್ತದೆ ಎನ್ನುವ ನಿರೀಕ್ಷೆ ಇದೆ. ಕರ್ನಾಟಕದಲ್ಲಿ ಕೊರೋನಾ ನಿಯಂತ್ರಣಕ್ಕೆ ಬರುತ್ತಿದೆ. ಬೆಂಗಳೂರಿನಲ್ಲಿ ಕಡಿಮೆಯಾಗುತ್ತಿದೆ. ಬೆಂಗಳೂರಿನ ಸುತ್ತಮುತ್ತ ಕೈಗಾರಿಕೆಗಳನ್ನು ಆರಂಭಿಸಲು ಅನುಕೂಲ ಮಾಡಿಕೊಡುತ್ತೇವೆ ಎಂದರು

ಸಾರ್ವಜನಿಕರು ಕರ್ಫ್ಯೂ ಪಾಲನೆ ಮಾಡಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆ. ಇವರ ಕೊಡುಗೆ ಅಪಾರ. ಮಾಧ್ಯಮಗಳು ಕೂಡ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಅದಕ್ಕಾಗಿ ಸರ್ಕಾರದ ವತಿಯಿಂದ ಧನ್ಯವಾದ ಅರ್ಪಿಸುತ್ತೇನೆ. ಕೊರೋನಾದಿಂದ ಖಿನ್ನತೆಗೆ ಒಳಾದವರ ಬಗ್ಗೆ ಸುದ್ದಿ ಪ್ರಕಟಿಸದೆ, ಕೊರೋನಾದಿಂದ ಗುಣಮುಖರಾಗಿ ಬಂದವರ ಆತ್ಮಸ್ಥೈರ್ಯವನ್ನು ಪ್ರಸಾರ ಮಾಡಬೇಕಾಗಿ ಮನವಿ ಮಾಡುತ್ತೇನೆ ಎಂದು ಮನವಿ ಮಾಡಿದರು.

ಸಾರ್ವಜನಿಕರು ಆತಂಕಕ್ಕೆ ಒಳಗಾಗುವುದು ಬೇಡ. ಸೋಂಕಿನಿಂದ ಚೇತರಿಕೆ ಆಗಿರುವವರು ಇತರರಿಗೆ ಧೈರ್ಯ ತುಂಬಬೇಕು. ವಾರಿಯರ್ಸ್ ಗಳು ಆತ್ಮಸ್ಥೈರ್ಯ ತುಂಬಬೇಕು. ಎಲ್ಲರೂ ಒಗ್ಗೂಡಿ ಇದನ್ನು ಹೋಗಲಾಡಿಸಲು ಶ್ರಮಿಸೋಣ ಎಂದು ಹೇಳಿದರು.

- Advertisement -

Latest News

error: Content is protected !!