ಬೆಂಗಳೂರು(ಮೇ.18): ರಾಜ್ಯ ಸರ್ಕಾರವೂ ಜನಸಂದಣಿ ಉಂಟಾಗಬಹುದಾದ ಚಟುವಟಿಕೆ ಹೊರತುಪಡಿಸಿ ನಾಳೆಯಿಂದ ಸಾರ್ವಜನಿಕ ಹಾಗೂ ಖಾಸಗಿ ಸಾರಿಗೆ ಸಂಚಾರ ಮತ್ತು ವ್ಯಾಪಾರ ವಹಿವಾಟು ಮಾಡಲು ಸಂಪೂರ್ಣ ಅವಕಾಶ ನೀಡಿದೆ. ನಾಲ್ಕನೇ ಹಂತದ ಲಾಕ್ಡೌನ್ ಜಾರಿಯಲ್ಲಿದ್ದರೂ ಸಿಎಂ ಬಿ.ಎಸ್ ಯಡಿಯೂರಪ್ಪ ಸರ್ಕಾರ ಕೆಲವು ಷರತ್ತುಗಳನ್ನು ವಿಧಿಸಿ ರಾಜ್ಯ ರಸ್ತೆ ಸಾರಿಗೆ ಬಸ್ಗಳು, ಆಟೋ ಮತ್ತು ಟ್ಯಾಕ್ಸಿಗಳು ನಾಳೆಯಿಂದ ಎಂದಿನಂತೆ ರಸ್ತೆಗಿಳಿಯಬಹುದು ಎಂದು ಘೋಷಿಸಿದ್ದಾರೆ.
ಆದರೆ ಕಡ್ಡಾಯವಾಗಿ ಬಸ್ ಹಾಗೂ ಇತರೆ ವಾಹನಗಳಲ್ಲಿ ಕಡ್ಡಾಯವಾಗಿ ರಾಜ್ಯ ಸರ್ಕಾರದ ನಿಯಮಗಳನ್ನು ಪಾಲನೆ ಮಾಡಲೇಬೇಕು. ಪ್ರತಿಯೊಬ್ಬರು ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಒಂದು ವೇಳೆ ಯಾರಾದರೂ ನಿಯಮಗಳನ್ನು ಉಲ್ಲಂಘಿಸಿದರೆ ಅಂಥವರ ಮೇಲೆ ದಂಡ ಬೀಳಲಿದೆ.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಸಂಪುಟ ಸಹೋದ್ಯೋಗಿಗಳು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿ, ರಾಜ್ಯದಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಿರುವ ವಿವರಗಳನ್ನು ನೀಡಿದರು.
ರೆಡ್ ಜೋನ್ ಹಾಗೂ ಕಂಟೋನ್ಮೆಂಟ್ ಹೊರತುಪಡಿಸಿ ಉಳಿದ ಕಡೆ ವಾಹನಗಳ ಸಂಚಾರಕ್ಕೆ ಷರತ್ತುಬದ್ದ ಅನುಮತಿಯನ್ನು ನೀಡಲಾಗಿದೆ. ರಾಜ್ಯದಲ್ಲಿ ಮೇ 31ರವರೆಗೆ ಲಾಕ್ಡೌನ್ ಮುಂದುವರೆಯಲಿದ್ದು, ಕೆಲವು ಚಟುವಟಿಕೆಗಳಿಗೆ ಷರತ್ತುಗಳನ್ನು ವಿಧಿಸಿ ಅನುಮತಿ ನೀಡಲಾಗಿದೆ ಎಂದು ಹೇಳಿದರು.
ಮಾಲ್, ಸಿನಿಮಾ ಹೋಟೆಲ್ ಬಿಟ್ಟು ಎಲ್ಲಾ ಅಂಗಡಿ ತೆರೆಯಬಹುದು. ಟ್ರೈನ್ ನಮ್ಮ ರಾಜ್ಯದ ಒಳಗೆ ಸಂಚಾರ ಮಾಡಬಹದು. ಸೆಲ್ಯೂನ್ ಓಪನ್ಗೆ ಅವಕಾಶ ನೀಡಿದ್ದೇವೆ ಎಂದು ಹೇಳಿದರು.
ಪ್ರತಿ ಭಾನುವಾರ ಕಂಪ್ಲೀಟ್ ಲಾಕ್ ಡೌನ್
ಪ್ರತಿ ಭಾನುವಾರ ಕಂಪ್ಲೀಟ್ ಲಾಕ್ಡೌನ್ ಮಾಡಲಾಗುವುದು. ಭಾನುವಾರ ಸಂಪೂರ್ಣ ಎಲ್ಲರೂ ರೆಸ್ಟ್ ಮಾಡಬೇಕು, ಎಲ್ಲಿಯೂ ಓಡಾಡುವ ಆಗಿಲ್ಲ. ಪಾರ್ಕ್ ಬೆಳಿಗ್ಗೆ 7 ರಿಂದ 9:30 ಮತ್ತು ಸಂಜೆ 5ರಿಂದ 7 ಎಲ್ಲಾ ಓಡಾಡಲು ಅವಕಾಶ ಕೊಡಲಾಗಿದೆ ಎಂದರು.