ಮಂಗಳೂರು: ತ್ಯಾಜ್ಯ ಎಸೆದವನಿಂದಲೇ ಸ್ಥಳೀಯರು ಹೆಕ್ಕಿಸಿ ಸ್ವಚ್ಛಗೊಳಿಸಿದ ಘಟನೆ ಉಳ್ಳಾಲ ಸಮೀಪದ ಕಿನ್ಯಾದಲ್ಲಿ ನಡೆದಿದೆ. ಉಳ್ಳಾಲ ನಿವಾಸಿ ಬದ್ರುದ್ದೀನ್ ಇರ್ಫಾನ್ ತ್ಯಾಜ್ಯ ಎಸೆದ ವ್ಯಕ್ತಿಯಾಗಿದ್ದು, ಮಂಜನಾಡಿಯ ಕಲ್ಕಟ್ಟ ಎಂಬಲ್ಲಿ ಹಣ್ಣಿನ ವ್ಯಾಪಾರಿಯಾಗಿದ್ದಾನೆ. ಇರ್ಫಾನ್ ಸ್ಕೂಟರ್ ನಲ್ಲಿ ಕಳೆದ ರವಿವಾರ ಬೆಳಗ್ಗೆ ಕಿನ್ಯಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಕೇಶ ತಿರುವು ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಗೋಣಿ ಚೀಲದಲ್ಲಿ ಕಸವನ್ನು ತಂದು ಎಸೆದಿದ್ದನು. ಈ ಮೊದಲೂ ಇರ್ಫಾನ್ ಇದೇ ರೀತಿ ಪರಿಸರದಲ್ಲಿ ತ್ಯಾಜ್ಯ ಎಸೆದಿರುವುದನ್ನು ಸ್ಥಳೀಯರು ಗಮನಿಸಿ ಆತ ತ್ಯಾಜ್ಯ ಎಸೆಯುವುದನ್ನು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದರು.
ಆದರೆ ಈ ಬಗ್ಗೆ ಇರ್ಫಾನ್ ಬೆದರಿಕೆ ಹಾಕಿದ್ದ ಎಂದು ತಿಳಿದು ಬಂದಿದೆ. ಈ ಕುರಿತು ಸ್ಥಳೀಯರು ಕಿನ್ಯಾ ಗ್ರಾಮ ಪಂಚಾಯತ್. ಪಿಡಿಒಗೆ ಮಾಹಿತಿ ನೀಡಿದ್ದರು. ಬಳಿಕ ಪಂಚಾಯತ್ ಪಿಡಿಒ ಉಳ್ಳಾಲ ಠಾಣೆಗೆ ದೂರು ಸಲ್ಲಿಸಿದ್ದರು. ದೂರಿನನ್ವಯ ಪೊಲೀಸರು ಇರ್ಫಾನ್ ಹಾಗೂ ಅವನ ಸ್ಕೂಟರ್ ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದರು. ಅಲ್ಲದೇ ಸ್ಥಳೀಯರು ಬದ್ರುದ್ದೀನ್ ಇರ್ಫಾನ್ ಕೈಯಿಂದಲೇ ತ್ಯಾಜ್ಯವನ್ನು ಹೆಕ್ಕಿಸಿ ಸ್ವಚ್ಛಗೊಳಿಸಿದ್ದಾರೆ.