ಕೊಚ್ಚಿ: ಕೇರಳದಲ್ಲಿ ಎಸ್ ಎಸ್ ಎಲ್ಸಿ ಪರೀಕ್ಷೆಯಲ್ಲಿ ಫೇಲ್ ಆದವರಿಗೆ ಉಚಿತ ಬಿರಿಯಾನಿ ಆಫರ್ ಸಿಕ್ಕಿದೆ. ಕೇರಳದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಶೇಕಡಾ 99.47 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕೆಲವೇ ಕೆಲವು ವಿದ್ಯಾರ್ಥಿಗಳು ಮಾತ್ರ ಪರೀಕ್ಷೆಯಲ್ಲಿ ಫೇಲ್ ಆಗಿದ್ದಾರೆ. ಫೇಲ್ ಆಗಿರುವ ವಿದ್ಯಾರ್ಥಿಗಳ ಮನೋಬಲವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನೆರವು ನೀಡಲು ಮುಂದಾಗಿರುವ ಕೆಲವು ಉದ್ಯಮಿಗಳು, ಉಚಿತ ಬಿರಿಯಾನಿ ಹಾಗೂ ಹೋಟೆಲ್ ವಾಸದ ಕೊಡುಗೆಯನ್ನು ಮುಂದಿಟ್ಟಿದ್ದಾರೆ.
ತಮಿಳುನಾಡಿನ ಕೊಡೈಕೆನಾಲ್ನಲ್ಲಿ ಹೋಂ ಸ್ಟೇ ಹಾಗೂ ರೆಸಾರ್ಟ್ ನಡೆಸುತ್ತಿರುವ ಕಲ್ಲಿಕೋಟೆ ಮೂಲದ ಸುಧೀಶ್ ಎಂಬವರು, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉಚಿತ ವಾಸದ ಕೊಡುಗೆ ಘೋಷಿಸಿದ್ದಾರೆ. ಕೊಚ್ಚಿ ಮೂಲದ ಇನ್ನೊಬ್ಬರು ಉದ್ಯಮಿ ಫೇಲ್ ಆದ ವಿದ್ಯಾರ್ಥಿಗಳಿಗೆ ಉಚಿತ ಬಿರಿಯಾನಿ ಆಫರ್ ಮಾಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಸುಧೀಶ್, ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅನೇಕ ಮಕ್ಕಳು ಫೇಸ್ಬುಕ್ನಲ್ಲಿ ಪೋಸ್ಟ್ ಮೂಲಕ ಸಂಭ್ರಮಿಸುತ್ತಾರೆ. ಆದರೆ ಫೇಲ್ ಆದ ವಿದ್ಯಾರ್ಥಿಗಳ ಮನೋಸ್ಥಿತಿ ಹೇಗಿರಬಹುದು? ಇದುವೇ ನನಗೆ ಈ ರೀತಿಯಾಗಿ ಯೋಚಿಸಲು ಪ್ರೇರೇಪಿಸಿದೆ. ಆರ್ಥಿಕವಾಗಿ ದುರ್ಬಲವಾಗಿರುವ ವ್ಯಕ್ತಿಗಳಿಂದ ಅನೇಕ ಕರೆಗಳು ಬರುತ್ತಿವೆ ಎಂದಿದ್ದಾರೆ. ಕೇರಳದಲ್ಲಿ 4.19 ಲಕ್ಷ ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರೆ, 2,236 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರು.