ಉಪ್ಪಿನಂಗಡಿ: ವಿದ್ಯುತ್ ಪರಿವರ್ತಕ ದುರಸ್ತಿ ವೇಳೆ ವಿದ್ಯುತ್ ಸ್ಪರ್ಶಿಸಿ ಲೈನ್ ಮ್ಯಾನ್ ಒಬ್ಬರು ಮೃತಪಟ್ಟಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿ ಬಳಿಯ ಹುಣಸೆಕಟ್ಟೆಯಲ್ಲಿ ನಡೆದಿದೆ.
ಬಿಜಾಪುರದ ಮೂಲದ ಬಸವರಾಜು (26 ವ) ಮೃತ ದುರ್ದೈವಿ.
ಘಟನೆಯ ವಿವರ:
ನಿನ್ನೆ ಸುರಿದ ಧಾರಾಕಾರ ಮಳೆಯಿಂದಾಗಿ ವಿದ್ಯುತ್ ಕಂಬವೊಂದರ ಪಿನ್ ನಲ್ಲಿ ಸಮಸ್ಯೆ ಉಂಟಾಗಿತ್ತು. ಈ ಕುರಿತು ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಬಸವರಾಜು, ಇಂದು ಮುಂಜಾನೆ ವಿದ್ಯುತ್ ಕಂಬವೇರಿ ಪರಿವರ್ತಕವನ್ನು ಪರಿಶೀಲಿಸಿ ನಂತರ ಚಾರ್ಜ್ ಮಾಡುವ ಸಮಯದಲ್ಲಿ ಗ್ರೌಂಡ್ ಶಾರ್ಟ್ ಆದ ಪರಿಣಾಮ ಶಾಕ್ ತಗುಲಿ ಸಾವನ್ನಪ್ಪಿದ್ದಾರೆ.
ಕೂಡಲೇ ಉಪ್ಪಿನಂಗಡಿ ಆಸ್ಪತ್ರೆಗೆ ಸಾಗಿಸುವ ವೇಳೆಗೆ ದಾರಿ ಮದ್ಯೆ ಬಸವರಾಜು ಕೊನೆಯುಸಿರೆಳೆದಿದ್ದಾರೆ. ಮೃತದೇಹವನ್ನು ಪುತ್ತೂರು ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ಯಲಾಗಿದೆ.
ಘಟನೆಯ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಜ್ಜನ ವ್ಯಕ್ತಿತ್ವ
ಸದಾ ನಗುಮುಖದಿಂದಿರುತ್ತಿದ್ದ ಬಸವರಾಜು ತನ್ನ ಕಾರ್ಯಕ್ಷಮತೆಯಿಂದಾಗಿ ಸ್ಥಳೀಯರಿಂದ ಅಪಾರ ಪ್ರೀತಿ ಸಂಪಾದಿಸಿದ್ದರು.
