ಕಡಬ: ವಿದ್ಯುತ್ ಶಾಕ್ ತಗುಲಿ ಲೈನ್ ಮ್ಯಾನ್ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಮೆಸ್ಕಾಂ ಅಧಿಕಾರಿಗಳ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಟ್ರುಪ್ಪಾಡಿ ಗ್ರಾಮದ ತಲೆಕ್ಕಿ ಸಮೀಪದ ಮುಳಿಮಜಲು ಎಂಬಲ್ಲಿ ಗುರುವಾರ ಬಾಗಲಕೋಟೆ ಮೂಲದ ದ್ಯಾವಣ್ಣ ದೊಡ್ಡಮನಿ ಎಂಬವರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿದ್ದರು.ವಿದ್ಯುತ್ ದುರಸ್ಥಿ ಮಾಡುವ ಸ್ಥಳದಲ್ಲಿ ಎರಡು ಟ್ರಾನ್ಸಫಾರ್ಮ್ ಗಳ ಎರಡು ಲೈನ್ಗಳು ಹಾದು ಹೋಗಿದ್ದು ಒಂದು ಲೈನ್ ಆಫ್ ಮಾಡಿದ್ದು ಮತ್ತೊಂದು ಲೈನ್ ವಿದ್ಯುತ್ ಪ್ರವಹಿಸಿರುವುದರಿಂದ ಅನಾಹುತ ನಡೆದಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಅಲ್ಲದೇ ಮೃತ ಲೈನ್ ಮ್ಯಾನ್ ಜೊತೆಗೆ ಹಿರಿಯ ಅಧಿಕಾರಿಗಳಾಗಲಿ ಅಥವಾ ಸಹಾಯಕ್ಕೆ ಯಾರನ್ನೂ ಕಳುಹಿಸದೇ ಹಾಗೂ ಹೆಲ್ಮೆಟ್ ಹ್ಯಾಂಡ್ಗ್ಲೌಸ್, ಶೂ ಸೇರಿದಂತೆ ಯಾವುದೇ ಸೇಫ್ಟಿ ಸಾಮಾಗ್ರಿಗಳನ್ನು ನೀಡದೆ ವಿದ್ಯುತ್ ಕಂಬ ಹತ್ತಲು ಹೇಳಿ ಮಗನ ಸಾವಿಗೆ ಕಾರಣರಾಗಿದ್ದಾರೆ ಎಂದು ಮೃತರ ತಂದೆ ರೇವಣಪ್ಪ ದೊಡಮನಿ ಎಂಬವರು ಮೆಸ್ಕಾಂ ಕಡಬದ ಸಹಾಯಕ ಇಂಜಿನಿಯರ್ ಆದ ಸತ್ಯನಾರಾಯಣ ಸಿ.ಕೆ. ಮತ್ತು ಕಿರಿಯ ಇಂಜಿನಿಯರ್ ವಸಂತ ರವರ ವಿರುದ್ಧ ಕಡಬ ಠಾಣೆಗೆ ದೂರು ನೀಡಿದ್ದಾರೆ.ಅದರಂತೆ ಇಬ್ಬರ ವಿರುದ್ಧ ದೂರು ದಾಖಲಾಗಿದೆ.