ಧರ್ಮಸ್ಥಳ: ಕಳೆಂಜ ಗ್ರಾಮದ ಕಾಯರ್ತಡ್ಕದ ಕಾರುಣ್ಯ ಟ್ರೆಡರ್ಸ್ ಎಂಬ ಅಡಿಕೆ ಅಂಗಡಿಯಿಂದ ಅಡಿಕೆ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಧರ್ಮಸ್ಥಳ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೆಪ್ಟೆಂಬರ್ 30ರಂದು ಕಾಯರ್ತಡ್ಕದ ಸಿದ್ದಿಕ್ ಆಲಿಗೆ ಸೇರಿರುವ ಕಾರುಣ್ಯ ಟ್ರೆಡರ್ಸ್ ನಲ್ಲಿ ರಾತ್ರಿ ಅಂಗಡಿಯ ಬಾಗಿಲಿನ ಬೀಗ ಮುರಿದು 1,50,000/- ರೂಪಾಯಿ ಮೌಲ್ಯದ ಸುಮಾರು 5.85 ಕ್ವಿoಟಾಲ್ ಅಡಿಕೆಯನ್ನು ಕದ್ದುಕೊಂಡು ಹೋಗಿರುವುದಾಗಿ ದೂರು ದಾಖಲಾಗಿತ್ತು.
ಪ್ರಕರಣವನ್ನು ಭೇದಿಸಿರುವ ಪೋಲೀಸರು ಆರೋಪಿ ರೆಖ್ಯ ಗ್ರಾಮದ ವಿನೋದ್ ನನ್ನು ವಶಕ್ಕೆ ಪಡೆದು ಕಾಯರ್ತಡ್ಕದಲ್ಲಿ ಕಳವುಗೈದ 1,50,000 ಮೌಲ್ಯದ ಅಡಿಕೆ ಮತ್ತು ಕಡಬ ಠಾಣೆಗೆ ಸಂಬಂಧಪಟ್ಟ ಸುಮಾರು 2,00,000 ರೂ ಮೌಲ್ಯದ ಅಡಿಕೆಯನ್ನು ವಶಪಡಿಸಿಕೊಂಡಿದ್ದಾರೆ.
ಕೃತ್ಯಕ್ಕೆ ಬಳಸಿದ ರೆಖ್ಯ ಗ್ರಾಮದ ಕಟ್ಟೆ ನಿವಾಸಿ ಬಾಲಕೃಷ್ಣ ಗೌಡರಿಗೆ ಸೇರಿರುವ ಭೂಮಿಕಾ ಹೆಸರಿನ ಮಹಿಂದ್ರ ಜೀಪನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಆರೋಪಿ ಪತ್ತೆಗಾಗಿ ಬೆಳ್ತಂಗಡಿ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ ರವರ ನೇತೃತ್ವದಲ್ಲಿ ಧರ್ಮಸ್ಥಳ ಠಾಣಾ ಪಿಎಸ್ಐ ಪವನ್ ನಾಯಕ್ ಮತ್ತು ಸಿಬ್ಬಂದಿಗಳಾದ ವೆಂಕಟೇಶ್, ಥಾಮಸ್, ಬೆನ್ನಿಚ್ಚನ್, ಪ್ರಮೋದ್ ನಾಯ್ಕ್, ಇಬ್ರಾಹಿಂ, ಲತೀಫ್. ಸತೀಶ್ ನಾಯ್ಕ್ ಪ್ರವೀಣ್ ಮತ್ತು ಚಾಲಕ ಅಸೀಫ್ ಪಾಲ್ಗೊಂಡಿದ್ದರು.