ಮಂಗಳೂರು: ಮಸೀದಿಯೊಂದರ ಹಣಕಾಸಿನ ವಿಚಾರದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವ್ಯಕ್ತಿಯೊಬ್ಬನಿಗೆ ಬೆದರಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಈಗ ನಗರದ ಬಲ್ಮಟ್ಟದಲ್ಲಿ ನೆಲೆಸಿರುವ ಹೆಜಮಾಡಿ ಮೂಲದ ಎಚ್ ಬಿ ಮೊಹಮ್ಮದ್ ಸುಮಾರು 10 ವರ್ಷಗಳಿಂದ ಕನ್ನಂಗಾರು ಮಸೀದಿಯ ಅಧ್ಯಕ್ಷರಾಗಿದ್ದರು. ಇತ್ತೀಚೆಗೆ ಹೆಜಮಾಡಿ ನಿವಾಸಿಗಳಾದ ಎಚ್.ಸೂಫಿ ಮತ್ತು ಆತನ ಸಹೋದರ ಶಂಶುದ್ದೀನ್ ಎಂಬುವವರೊಂದಿಗೆ ಮಸೀದಿಗೆ ಸಂಬಂಧಿಸಿದ ಹಣಕಾಸಿನ ವಿಚಾರದಲ್ಲಿ ಜಗಳವಾಗಿತ್ತು. ಶಂಶುದ್ದೀನ್ ಮೊಹಮ್ಮದ್ಗೆ ಕರೆ ಮಾಡಿ ವಾಟ್ಸ್ಆ್ಯಪ್ ಸಂದೇಶ ರವಾನಿಸಿ ಜೀವ ಬೆದರಿಕೆ ಹಾಕಿದ್ದ. ಈ ಸಂಬಂಧ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಶಂಶುದ್ದೀನ್ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ, ಆತನ ಹೆಸರಿನಲ್ಲಿ ಎಲ್ಒಸಿ (ಲುಕ್ ಔಟ್ ಸುತ್ತೋಲೆ) ಇದ್ದ ಕಾರಣ ಆತನನ್ನು ಇಮಿಗ್ರೇಷನ್ ಅಧಿಕಾರಿಗಳು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.