ಉಡುಪಿ: ಅಪಘಾತದಲ್ಲಿ ಸಾವನ್ನಪ್ಪಿದ್ದ ಬೆಳ್ತಂಗಡಿ ಮೂಲದ ವ್ಯಕ್ತಿಯೊಬ್ಬರ ಕುಟುಂಬಕ್ಕೆ ಬರಬೇಕಾಗಿದ್ದ ಹಣವನ್ನು ನಕಲಿ ದಾಖಲೆ ಹಾಗೂ ವ್ಯಕ್ತಿಗಳನ್ನು ಸೃಷ್ಟಿಸಿ ಬಡ ದಲಿತ ಕುಟುಂಬಕ್ಕೆ ಹಾಗೂ ನ್ಯಾಯಾಲಯಕ್ಕೆ ವಂಚಿಸಿದ ಆರೋಪದಡಿ ಉಡುಪಿಯ ವಕೀಲ ಅಲೆವೂರು ಪ್ರೇಮರಾಜ ಕಿಣಿಯ ವಿಚಾರಣೆ ನಡೆಸಿದ ಉಡುಪಿ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿದೆ.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕು ನಾರವಿ ಮೂಡಕೋಡು ಗ್ರಾಮದ ಕಡಂಬಿಲದ ಬಡ ಕೂಲಿ ಕಾರ್ಮಿಕರಾಗಿರುವ ಚಂಬು ಅವರ ಪತ್ನಿ ಕುಂದಾದು 2002ರ ಮೇ 13ರಂದು ಕೊಲ್ಲೂರಿಗೆಂದು ತೆರಳುತಿದ್ದಾಗ ಕಾರ್ಕಳ ತಾಲೂಕು ಕಸಬಾ ಗ್ರಾಮದ ಸಾಲ್ಮರದ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.
ಈ ಬಗ್ಗೆ ಗಂಡ ಚಂಬು ಹಾಗೂ ಅವರ ಮಕ್ಕಳಾದ ಅಣ್ಣು, ಸಾಧು, ಅಕ್ಕು ಹಾಗೂ ಕಜವೆ ಅಪಘಾತ ವಿಮಾ ಪರಿಹಾರ ಕೋರಿ ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಪ್ರಕರಣ ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ತನಿಖೆಯಾಗಿದ್ದು ನ್ಯಾಯಾಲಯ 2003ರ ಆಗಸ್ಟ್ನಲ್ಲಿ 1,22,400ರೂ. ಪರಿಹಾರ ಹಾಗೂ ಬಡ್ಡಿ ಸೇರಿ 1,33,246ರೂ. ಪರಿಹಾರ ನೀಡುವಂತೆ ಆದೇಶ ಹೊರಡಿಸಿತ್ತು. ಅದನ್ನು ಪಡೆದ ಚಂಬು ಕುಟುಂಬ ಪರಿಹಾರ ಮೊತ್ತ ಕಡಿಮೆಯಾಗಿದೆ ಎಂದು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿ ಪುರಸ್ಕರಿಸಿದ್ದ ಹೈಕೋರ್ಟ್ ಪರಿಹಾರ ನೀಡುವಂತೆ ಆದೇಶ ನೀಡಿತ್ತು.
ಉಚ್ಛ ನ್ಯಾಯಾಲಯದ ಆದೇಶದಂತೆ ವಿಮಾ ಕಂಪೆನಿ 1,85,600ರೂ. ಬಡ್ಡಿ ಸೇರಿ ಒಟ್ಟು 2,57,549 ರೂ.ಮೊತ್ತದ ಹಣವನ್ನು ನ್ಯಾಯಾಲಯದಲ್ಲಿ ಜಮೆ ಮಾಡಿತ್ತು. ಆದರೆ ಈ ಹಂತದಲ್ಲಿ ಆರೋಪಿಗಳು, ಪಿರ್ಯಾದುದಾರರು, ನ್ಯಾಯಾಲಯ ಹಾಗೂ ಬ್ಯಾಂಕ್ ಅಧಿಕಾರಿಗಳನ್ನು ವಂಚಿಸಿ ಬಡ ಕುಟುಂಬಕ್ಕೆ ಸಿಗಬೇಕಿದ್ದ ಪರಿಹಾರ ಮೊತ್ತವನ್ನು ನಕಲಿ ದಾಖಲೆ ಹಾಗೂ ನಕಲಿ ವ್ಯಕ್ತಿಗಳನ್ನು ಸೃಷ್ಟಿಸಿ ಪೂರ್ತಿ ಹಣವನ್ನು ಲಪಟಾಯಿಸಿದ್ದರು. ಅದರಂತೆ ವಂಚಿಸಿದ ವಕೀಲ ಪ್ರೇಮರಾಜ ಕಿಣಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೇ ಪ್ರಕರಣದ ಎರಡನೇ ಆರೋಪಿಯಾದ ವಿನಯಕುಮಾರ್ ಎಂಬಾತನಿಗೆ ಏಳು ವರ್ಷಗಳ ಶಿಕ್ಷೆಯನ್ನು ವಿಧಿಸಲಾಗಿದೆ.