ಬೆಂಗಳೂರು: ಕೊಡವ ನ್ಯಾಷನಲ್ ಕೌನ್ಸಿಲ್(ಸಿಎನ್ಸಿ) ಬಹುಭಾಷಾ ರಶ್ಮಿಕಾ ಮಂದಣ್ಣ ಅವರಿಗೆ ಸೂಕ್ತ ಭದ್ರತೆ ನೀಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕರ್ನಾಟಕದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ಪತ್ರ ಬರೆದಿದೆ.
ನಟಿ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ತಾನು ಹೈದರಾಬಾದ್ ಹುಡುಗಿ ಎಂದು ಹೇಳಿದ್ದು, ಈ ಬಗ್ಗೆ ಎಲ್ಲೆಡೆಯೂ ಆಕ್ರೋಶ ವ್ಯಕ್ತವಾಗಿತ್ತು. ಕಾಂಗ್ರೆಸ್ ಶಾಸಕ ರವಿ ಗಣಿಗ ನಾವು ರಶ್ಮಿಕಾ ಅವರನ್ನು ಬೆಂಗಳೂರು ಚಲನಚಿತ್ರೋತ್ಸವಕ್ಕೆ ಕರೆದಿದ್ದು, ಆದರೆ ರಶ್ಮಿಕಾ ಅವರು ನಮ್ಮ ಆಹ್ವಾನವನ್ನು ತಿರಸ್ಕರಿಸಿದರು. ರಶ್ಮಿಕಾ ಚಿತ್ರೋತ್ಸವಕ್ಕೆ ಆಮಂತ್ರಣವಿದ್ದರೂ ಹಾಜರಾಗಿಲ್ಲ. ಹೀಗಾಗಿ ಅವರಿಗೆ ತಕ್ಕ ಪಾಠ ಕಲಿಸಬೇಕೆಂದು ಹೇಳಿ ಟೀಕಿಸಿದ್ದರು. ಈ ನಿಟ್ಟಿನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸದಾ ಟೀಕೆಗೆ ಒಳಗಾಗಿಗುತ್ತಿರುವ ರಶ್ಮಿಕಾ ಅವರಿಗೆ ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಲಾಗಿದೆ.
ಪತ್ರವನ್ನು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್. ಯು. ನಾಚಪ್ಪ ಅವರು ಬರೆದಿದ್ದಾರೆ.
ಪತ್ರದಲ್ಲಿರುವ ವಿಷ್ಯ ಹೀಗಿದೆ; “ಶಾಸಕರೊಬ್ಬರು ಬೆದರಿಸುತ್ತಿದ್ದಾರೆ ಎಂದು ಆರೋಪಿಸಿದ್ದು, ಇದನ್ನು ಕೊಡವರು “ಗೂಂಡಾಗಿರಿ” ಎಂದು ಪರಿಗಣಿಸುತ್ತಾರೆ. ಸ್ಥಳೀಯ ಕೊಡವ ಬುಡಕಟ್ಟು ಜನಾಂಗಕ್ಕೆ ಸೇರಿರುವ ರಶ್ಮಿಕಾ ಸಾಕಷ್ಟು ಪರಿಶ್ರಮ ಪಟ್ಟು ತನ್ನ ಪ್ರತಿಭೆಯಿಂದ ಯಶಸ್ವಿಯಾಗಿ ಬೆಳೆದಿದ್ದಾರೆ. ಅವರು ಅಮಿತಾಬ್ ಬಚ್ಚನ್ ಮತ್ತು ಸಲ್ಮಾನ್ ಖಾನ್ ಅವರಂತಹ ಪ್ರಮುಖ ನಟರೊಂದಿಗೆ ನಟಿಸಿದ್ದಾರೆ. ರಶ್ಮಿಕಾ ಅವರು ಸ್ವಂತ ಆಯ್ಕೆ ಮಾಡುವ ಸ್ವಾತಂತ್ರ್ಯ ಹೊಂದಿದ್ದು, ಅದನ್ನು ಗೌರವಿಸಬೇಕು. ಅದನ್ನು ಬಿಟ್ಟು ಯಾರೋ ಒಬ್ಬರ ಸೂಚನೆಯಂತೆ, ನಿರೀಕ್ಷೆಯಂತೆ ಇರಬೇಕು ಎಂದು ಒತ್ತಡ ಹೇರಬಾರದು. ಅಲ್ಲದೇ ಕೇವಲ ರಶ್ಮಿಕಾ ಅವರ ಸಮುದಾಯದ ಕಾರಣದಿಂದ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಅರ್ಥ ಬರುತ್ತದೆ ಎಂದು ಪತ್ರದಲ್ಲಿ ಬರೆದಿದ್ದಾರೆ.