ಮಂಗಳೂರು: ಪ್ರಧಾನಿ ಹಾಗೂ ಮುಖ್ಯಮಂತ್ರಿ ಅವರಿಗೆ ತುಳುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕು ಮತ್ತು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ ಪತ್ರ ಬರೆಯುವ ಚಳವಳಿಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಒಂದಕ್ಕಿಂತ ಹೆಚ್ಚು ಅಧಿಕೃತ ಭಾಷೆಗಳಿರುವ ಆಂಧ್ರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ರಾಜ್ಯಗಳಿಗೆ ನಮ್ಮ ರಾಜ್ಯ ಸರ್ಕಾರವು ಪತ್ರ ಬರೆದು, ಈ ಬಗ್ಗೆ ಮಾಹಿತಿ ಕೇಳಿದೆ ಎಂದು ಮಾಜಿ ಶಾಸಕ ಮೊಹಿಯುದ್ದೀನ್ ಬಾವ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ‘ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎರಡು ತಿಂಗಳುಗಳಲ್ಲಿ ಸಾವಿರಾರು ಮಂದಿ ಪತ್ರ ಬರೆದಿದ್ದಾರೆ. ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯಾದಿಯಾಗಿ ತುಳುನಾಡಿನ ಗಣ್ಯರು, ಸುನಿಲ್ ಶೆಟ್ಟಿ, ಶಿಲ್ಪಾ ಶೆಟ್ಟಿ ಆದಿಯಾಗಿ ಸಿನಿಮಾ ತಾರೆಯರು ಸೇರಿದಂತೆ ಅನೇಕರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ತುಳು ಭಾಷೆಗೆ ಮಾನ್ಯತೆ ಸಿಗುವವರೆಗೂ ಈ ಹೋರಾಟ ಮುಂದುವರಿಯಲಿದೆ’ ಎಂದರು.
‘ವಿಧಾನ ಪರಿಷತ್ನಲ್ಲಿ ಬಿ.ಎಂ. ಫಾರೂಕ್ ಹಾಗೂ ವಿಧಾನಸಭೆಯಲ್ಲಿ ಗುರ್ಮೆ ಸುರೇಶ ಶೆಟ್ಟಿ ಈ ಬಗ್ಗೆ ಪ್ರಶ್ನೆ ಕೇಳಿದ್ದು, ಚರ್ಚೆಗೆ ಸೋಮವಾರ ಸಮಯ ನಿಗದಿಯಾಗಿದೆ. ಈ ಚರ್ಚೆಯಲ್ಲಿ ತುಳುನಾಡಿನ ಶಾಸಕರು ಸಕ್ರಿಯವಾಗಿ ಭಾಗವಹಿಸಿ ತುಳುವಿಗೆ ರಾಜ್ಯದಲ್ಲಿ ಅಧಿಕೃತ ಭಾಷೆಯ ಸ್ಥಾನಮಾನಕ್ಕಾಗಿ ಆಗ್ರಹಿಸಬೇಕು’ ಎಂದು ಒತ್ತಾಯಿಸಿದರು.
‘ತುಳುನಾಡಿನ ಸಂಘ ಸಂಸ್ಥೆಗಳು, ವಿವಿಧ ರಂಗಗಳ ಪ್ರಮುಖರ ಸಂವಾದವನ್ನು ಮಾ.2ರಂದು ಸಂಜೆ 5 ಗಂಟೆಗೆ ನಗರದಲ್ಲಿ ಆಯೋಜಿಸಿದ್ದೇವೆ. ಸಭೆಯಲ್ಲಿ ವ್ಯಕ್ತವಾಗು ಅಭಿಪ್ರಾಯ ಆಧರಿಸಿ ಮುಂದಿನ ಹೋರಾಟ ರೂಪಿಸಲಾಗುವುದು’ ಎಂದರು.
ತುಳುನಾಡು ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಇದ್ದರು.