ಕಾರವಾರ : ಚಿರತೆಯೊಂದು ಮನೆಯೊಳಗೆ ನುಗ್ಗಿ ಪುಟ್ಟ ಮಗುವನ್ನು ಹೊತ್ತೊಯ್ಯಲು ಯತ್ನಿಸಿ ಆತಂಕ ಸೃಷ್ಟಿಸಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದೆ.
ಕುಮಟಾ ತಾಲೂಕಿನ ಬರ್ಗಿ ಗ್ರಾಮದಲ್ಲಿ ನಿನ್ನೆ ರಾತ್ರಿ ಸುಮಾರು 9.30ರ ವೇಳೆಗೆ ನಾರಾಯಣ ನಾಯ್ಕ ಮನೆಯ ಸದಸ್ಯರು ಊಟಕ್ಕೆಂದು ಕುಳಿತಿದ್ದರು. ನಿರ್ಮಾಣ ಹಂತದಲ್ಲಿದ್ದ ಮನೆಯೊಳಗೆ ಮಕ್ಕಳು ಆಟವಾಡುತ್ತಿದ್ದಾಗ ಮನೆಯ ಹಿಂದಿನ ಬಾಗಿಲಿನ ಮೂಲಕ ಮನೆಯೊಳಗೆ ಚಿರತೆ ನುಗ್ಗಿದೆ. ಈ ವೇಳೆ ಚಿರತೆಯನ್ನು ಕಂಡು ಕುಟುಂಬಸ್ಥರು ದಿಗ್ಭ್ರಾಂತರಾಗಿದ್ದಾರೆ.ಒಳಗಡೆ ನುಗ್ಗಿದ ಚಿರತೆ ಮಗುವನ್ನೇ ದಿಟ್ಟಿಸಿ ನೋಡುತ್ತಿತ್ತು. ಹೀಗಾಗಿ ಚಿರತೆಯನ್ನ ಕಂಡು ಕುಟುಂಬಸ್ಥರು ಮಗುವನ್ನು ಹೊತ್ತು ಹೊರಗಡೆ ಓಡಿ ಬಂದಿದ್ದಾರೆ. ಮನೆಯ ಹಿರಿಯರನ್ನು ಕಂಡ ಕೂಡಲೇ ಚಿರತೆ ಸ್ಥಳದಿಂದ ಕಾಲ್ಕಿತ್ತಿದೆ.
ಚಿರತೆ ಬಂದಿರುವ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ನೀಡಿದರೂ ಅರಣ್ಯ ಇಲಾಖೆ ಅಧಿಕಾರಿಗಳು ತಡವಾಗಿ ಸ್ಥಳಕ್ಕೆ ಆಗಮಿಸಿದ್ದರು. ಕಳೆದ ಕೆಲವು ದಿನಗಳಿಂದ ಚಿರತೆ ನಿರಂತರವಾಗಿ ಗ್ರಾಮಗಳತ್ತ ಬರುತ್ತಿದೆ. ಇದರಿಂದ ಜನರು ಅಕ್ಷರಶಃ ಕಂಗಾಲಾಗಿ ಹೋಗಿದ್ದಾರೆ.