ಬೆಳ್ತಂಗಡಿ: ದ.ಕ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸವಣಾಲು ಗ್ರಾಮದ ಹಲವೆಡೆ ಗುಡ್ಡ ಕುಸಿತವಾಗುತ್ತಿದೆ. ಸವಣಾಲು ಗ್ರಾಮದ ನಡ್ತಿಕಲ್ಲು ಎಂಬಲ್ಲಿ ರಘಚಂದ್ರ ಭಂಡಾರಿ ಎಂಬವರ ಜಾಗದಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿದೆ. ಸ್ಥಳೀಯ ನಿವಾಸಿ ವಸಂತ ಎಂಬವರ ಮನೆಗೆ ಮಣ್ಣು ನೀರು ನುಗ್ಗಿದ್ದು, ಸಂಜೆಯ ವೇಳೆ ಗುಡ್ಡಕುಸಿತವಾಗಿದ್ದು ಮನೆ ಅಪಾಯದಲ್ಲಿದ್ದು ಮನೆಯವರನ್ನು ಸ್ಥಳಾಂತರಿಸಲಾಗಿದೆ. ಗುರುವಾಯನಕೆರೆ ಮಸೀದಿಯ ಸಮೀಪ ಭೂಕುಸಿತವಾಗಿದ್ದು ಮಸೀದಿಯ ಆವರಣದ ವರೆಗೂ ಗೋಡೆ ಕುಸಿದು ಬಿದ್ದಿದೆ ಎಂದು ತಿಳಿದು ಬಂದಿದೆ.

ಬಾರ್ಯ ಗ್ರಾಮಪಂಚಾಯತಿನ ಕಜೆಮಾರಿನಲ್ಲಿ ಭೂಮಿ ಕುಸಿಯುವ ಅಪಾಯ ಎದುರಾಗಿದ್ದು, ಮೂರು ಮನೆಗಳು ಅಪಾಯದಲ್ಲಿದೆ. ಇಲ್ಲಿನ ಮನೆಯವರನ್ನು ಸ್ಥಳಾಂತರಿಸಲಾಗಿದೆ. ಇನ್ನು ನಾವೂರು ಗ್ರಾಮದಲ್ಲಿ ಅಲ್ಲಲ್ಲಿ ಗುಡ್ಡ ಕುಸಿತವಾಗಿದ್ದು ಹಲವೆಡೆ ರಸ್ತೆಗಳಿಗೆ ತೋಟಗಳಿಗೆ ಹಾಗೂ ಮನೆಗಳಿಗೆ ಹಾನಿಯಾಗಿದೆ. ಲಾಯಿಲದಲ್ಲಿಯೂ ಹಲವೆಡೆ ಭೂಕುಸಿತವಾಗಿದೆ. ನದಿ ನೀರು ಬುಧವಾರ ರಾತ್ರಿಯ ವೇಳೆ ತೋಟಗಳಿಗೆ ಮನೆಗಳಿಗೆ ನುಗ್ಗಿದೆ.

ಬೆಳ್ತಂಗಡಿ ನಗರದ ಚರ್ಚ್ ರೋಡ್ ಸಮೀಪದ ನಿವಾಸಿ ವಿನ್ಸೆಂಟ್ ಎಂಬವರ ಮನೆಯ ಸಮೀಪ ಗುಡ್ಡ ಕುಸಿತವಾಗಿದೆ. ಮನೆಯೊಳಗೆ ಮಣ್ಣು ನುಗ್ಗಿದೆ. ಕಣಿಯೂರು ಗ್ರಾಮದ ಭದ್ರೊಟ್ಟು ತಿಮ್ಮಪ್ಪ ಶೆಟ್ಟಿ ಎಂಬವರ ತೋಟದ ಬಳಿ ದೊಡ್ಡ ಪ್ರಮಾಣದಲ್ಲಿ ಭೂಕುಸಿತವಾಗಿದ್ದು, ತೋಟಕ್ಕೆ ಬೃಹತ್ ಗಾತ್ರದ ಮರಗಳು ಉರುಳಿ ಬಿದ್ದಿದೆ. ತೋಟದ ತೋಡು ಬಂದ್ ಆಗಿದ್ದು ತೋಟ ಸಂಪೂರ್ಣವಾಗಿ ಜಲಾವೃತವಾಗಿದೆ.

ಇನ್ನು ಭಾರೀ ಮಳೆಯಿಂದಾಗಿ ಹಲವೆಡೆಗಳಲ್ಲಿ ರಸ್ತೆ ಸಂಚಾರಗಳನ್ನು ಬಂದ್ ಮಾಡಲಾಗಿದೆ.