ಮಡಿಕೇರಿ : ಭಾರೀ ಮಳೆಯಿಂದಾಗಿ ಮಡಿಕೇರಿಯಲ್ಲಿ ಮತ್ತೆ ಗುಡ್ಡ ಕುಸಿಯುವ ಭೀತಿ ಎದುರಾಗಿದೆ. ಈ ಹಿನ್ನೆಲೆ ಜಿಲ್ಲಾಡಳಿತವು 7 ಕುಟುಂಬಗಳ ಸ್ಥಳಾಂತರಕ್ಕೆ ನೋಟಿಸ್ ನಲ್ಲಿ ಸೂಚಿಸಿದೆ.
ಕಳೆದ 10 ದಿನಗಳಿಂದ ಮಡಿಕೇರಿಯಲ್ಲಿ ಮಳೆಯ ಆರ್ಭಟ ಜೋರಾಗಿದೆ. ಇದರಿಂದಾಗಿ ಮಡಿಕೇರಿ ತಾಲೂಕಿನ ಮಕ್ಕಂದೂರು ಗ್ರಾಮದಲ್ಲಿ ಮತ್ತೆ ಬೆಟ್ಟ ಕುಸಿಯುವಂತ ಭೀತಿ ಎದುರಾಗಿದೆ. ಈ ಹಿನ್ನಲೆಯಲ್ಲಿಯೇ ಮಕ್ಕಂದೂರು ಗ್ರಾಮದ ಉದಯಗಿರಿ ಬೆಟ್ಟದ ಸಮೀಪದಲ್ಲಿನ 7 ಕುಟುಂಬಗಳಿಗೆ ಜಿಲ್ಲಾಡಳಿತ ಬೆಟ್ಟಕುಸಿಯುವ ಭೀತಿಯಿಂದ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಿದೆ.
2018ರಲ್ಲಿ ಮಾದಾಪುರ – ಮಡಿಕೇರಿ ನಡುವಿನ ಮಕ್ಕಂದೂರಿನ ಬಾಲಾಜಿ ತೋಟದ ಬಳಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತಗೊಂಡಿತ್ತು. ಇದರಿಂದಾಗಿ ಉದಯಗಿರಿ, ಮೇಘತಾಳು, ತಂತಿಪಾಲ ಹಾಗೂ ಹುಲಿತಾಳ ಪ್ರದೇಶದಲ್ಲಿ ನಷ್ಟ ಉಂಟಾಗಿತ್ತು. ಈ ಭೀತಿ ಮರೆಯಾಗುವ ಮುನ್ನವೇ, ಈಗ ಮತ್ತೆ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವಂತ ಭಾರೀ ಮಳೆಯಿಂದಾಗಿ ಮತ್ತೆ ಬೆಟ್ಟ ಕುಸಿಯುವ ಭೀತಿ ಎದುರಾಗಿದ್ದು, ಜಿಲ್ಲಾಡಳಿತ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಕುಟಂಬಗಳಿಗೆ ನೋಟಿಸ್ ನೀಡಿ, ಸೂಚಿಸಿದೆ.