ಕಡಬ; ಪತಿಗೆ ವಿಷ ತಾಗಿದ ಸುದ್ದಿ ಕೇಳಿದ ಪತ್ನಿ ಹೃದಯಾಘಾತದಿಂದ ನಿಧನವಾಗಿರುವ ಘಟನೆ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದಲ್ಲಿ ನಡೆದಿದೆ.
ಕೌಕ್ರಾಡಿ ಗ್ರಾಮದ ತೋಟ ಮನೆ ನಿವಾಸಿ, ಅಂಚೆ ಇಲಾಖೆಯ ನಿವೃತ್ತ ಸಿಬ್ಬಂದಿ ಪದ್ಮಯ್ಯ ಗೌಡರವರ ಪತ್ನಿ ದೇವಕಿ(ಸೇಸಮ್ಮ)(60) ಮೃತ ದುರ್ದೈವಿ.
ಪದ್ಮಯ್ಯ ಗೌಡ(66.) ಅವರಿಗೆ ಆ.5ರಂದು ಬೆಳಿಗ್ಗೆ 11 ಗಂಟೆಯ ವೇಳೆಗೆ ತಮ್ಮ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ವಿಷ ಜಂತುವೊಂದು ಕಡಿದಿತ್ತು. ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಅಘಾತಗೊಂಡ ಅವರ ಪತ್ನಿ ಅದೇ ದಿನ ರಾತ್ರಿ 12 ಗಂಟೆ ವೇಳೆಗೆ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಎದೆನೋವು ಕಾಣಿಸಿಕೊಂಡಿದ್ದ ದೇವಕಿಯವರನ್ನು ಮನೆಯವರು ತಕ್ಷಣ ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಗೆ ಕರೆತಂದರಾದರೂ ಆ ವೇಳೆಗೆ ಅವರು ಮೃತಪಟ್ಟಿದ್ದರು. ಪತ್ನಿ ಸಾವನ್ನಪ್ಪಿದ ವಿಚಾರ ತಿಳಿದ ಪದ್ಮಯ್ಯ ಗೌಡ ಅವರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿ ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ.


