ಕುಂದಾಪುರ: ಕರ್ನಾಟಕ ಸರ್ಕಾರ ಬಡವರಿಗೆ ನೀಡುವ ಉಚಿತ ಪಡಿತರ ಅಕ್ಕಿಯನ್ನು ಸಂಗ್ರಹಿಸಿ ಕೇರಳಕ್ಕೆ ಸಾಗಿಸುವ ದಂಧೆಯ ಮೇಲೆ ಉಡುಪಿ ಡಿಸಿಐಬಿ ಪೊಲೀಸರು ದಾಳಿ ಮಾಡಿದ್ದಾರೆ. ಅಕ್ಕಿಯನ್ನು ಕೇರಳಕ್ಕೆ ಸಾಗಿಸುವ ಐವರು ಚೋರರ ಬಂಧನವಾಗಿದೆ.
ಈ ಮೂಲಕ ಸರ್ಕಾರದ ಅಕ್ಕಿ ಪಡೆದು ಅದನ್ನು ಕಾಳ ಸಂತೆಯಲ್ಲಿ ಮಾರಾಟ ಮಾಡುವ ಬ್ರಹತ್ ಭೂಗತ ನೆಟ್ ವರ್ಕ್ ಒಂದನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಡಿಸಿಐಬಿ ಪೊಲೀಸರು ಮಿಂಚಿನ ಕಾರ್ಯಾಚರಣೆ ಮಾಡಿದ್ದು, ಅಕ್ಕಿ ಸಂಗ್ರಹ ಮತ್ತು ಕೇರಳಕ್ಕೆ ಮಾರಾಟ ಮಾಡುವ ದಂಧೆಗೆ ಬಲೆ ಬೀಸಿದ್ದಾರೆ.
ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಕೋಟೇಶ್ವರದ ಅಕ್ರಮ ಅಕ್ಕಿ ದಾಸ್ತಾನು ಗೋಡಾನ್ ನಲ್ಲಿ ಸಂಗ್ರಹಿಸಿ ಇಟ್ಟಿದ್ದ 55 ಟನ್ (55 ಸಾವಿರ) ಕಿಲೋ ಅಕ್ಕಿಯನ್ನು ಸುಪರ್ದಿಗೆ ಪಡೆದಿದ್ದಾರೆ.
ಡಿಸಿಐಬಿ ಪೊಲೀಸ್ ಇನ್ಸ್ಪೆಕ್ಟರ್ ಮಂಜಪ್ಪ ಅವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ತಂಡದ ಜೊತೆ ತೆರಳಿ ರೈಡ್ ನಡೆಸಿದ್ದಾರೆ. ಸ್ಥಳದಲ್ಲಿದ್ದ ಐವರ ಬಂಧನವಾಗಿದ್ದು, ಕೆಲ ಖದೀಮರು ಪರಾರಿಯಾಗಿದ್ದಾರೆ. ಅಕ್ಕಿ ತುಂಬಿ ಕೇರಳಕ್ಕೆ ಹೊರಟಿದ್ದ ಲಾರಿ, ಅಕ್ಕಿ ವಶವಾಗಿದೆ. ಕಾರ್ಯಾಚರಣೆಯಲ್ಲಿ 2.75 ಲಕ್ಷ ರೂಪಾಯಿ ನಗದು ವಶವಾಗಿದ್ದು, ಸ್ಥಳದಲ್ಲಿದ್ದ ಮೂರು ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಲಾರಿ ಸೇರಿ ಸುಮಾರು ಒಂದು ಕೋಟಿ ರೂ ಮೌಲ್ಯದ ಸೊತ್ತು ವಶವಾಗಿದೆ ಎಂದು ಡಿಸಿಐಬಿ ಇನ್ಸ್ಪೆಕ್ಟರ್ ಮಂಜಪ್ಪ ಮಾಹಿತಿ ಕೊಟ್ಟಿದ್ದಾರೆ.
ಬಂಧಿತರಾದ ಇಸ್ಮಾಯಿಲ್ ಬ್ಯಾರಿ, ಮುಸ್ತಫಾ ತೌಫಿಕ್, ಉಬೇದುಲ್ಲಾ, ಮಹಮ್ಮದ್ ಮೇಚ್ರಾ, ನಿಯಾಸ್ ಸರ್ಕಾರದ ಫ್ರೀ ರೇಶನ್ ಅಕ್ಕಿಯನ್ನು ಒಟ್ಟು ಮಾಡುತ್ತಿದ್ದರು. ಉಚಿತ ಅಕ್ಕಿಗೆ ಪುಡಿಗಾಸು ರೇಟ್ ಫಿಕ್ಸ್ ಮಾಡಿ ಖರೀದಿಸುತ್ತಿದ್ದರು. ಉಚಿತ ಅಕ್ಕಿಗೆ ಪಾಲಿಶ್ ಮಾಡಿ ಸೋನಮಸೂರಿಯ ಶೇಪ್ ಕೊಟ್ಟು ಕೇರಳಕ್ಕೆ ಸಪ್ಲೈ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಖದೀಮರು ಕುಂದಾಪುರ ಮೂಡು ಗೋಪಾಡಿ ಮತ್ತು ಕೇರಳ ಮೂಲದವರಾಗಿದ್ದು, ಇನ್ನಷ್ಟೇ ಹೆಚ್ಚಿನ ಮಾಹಿತಿ ಲಭ್ಯ ಆಗಬೇಕಿದೆ.