ಪುತ್ತೂರು: ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಕೊರಗ ಸಮುದಾಯವು ಹೆಚ್ಚಿನ ಸಂಖ್ಯೆಯಲ್ಲಿ
ವಾಸಿಸುತ್ತಿದ್ದಾರೆ. ಆದಾಗ್ಯೂ ಇತ್ತೀಚಿನ ವರ್ಷಗಳಲ್ಲಿ, ಅವರ ಜನಸಂಖ್ಯೆಯು ವೇಗವಾಗಿ ಕ್ಷೀಣಿಸುತ್ತಿದೆ ಮತ್ತು ಈ ಸಮುದಾಯವು ಅಳಿವಿನತ್ತ ವೇಗವಾಗಿ ಚಲಿಸುತ್ತಿರುವ ಭಾರತೀಯ ಸಮುದಾಯಗಳಲ್ಲಿ ಒಂದಾಗಿದೆ.
ಕೊರಗ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರವು ಕೊರಗ ಕಾಲೋನಿಗಳಿಗೆ ಅಧಿಕಾರಿಗಳನ್ನು ಕಳುಹಿಸುವ ಹೊಸ ಯೋಜನೆ ಪ್ರಾರಂಭಿಸಿದೆ. ಇಲ್ಲಿನ ಕರಾವಳಿ ತೀರದ ಮೂಲ ನಿವಾಸಿಗಳಾಗಿರುವ ಕೊರಗರು ಅಪೌಷ್ಟಿಕತೆ, ಅನಾರೋಗ್ಯ, ಬಡತನ, ಶಿಕ್ಷಣದ ಕೊರತೆ ಮತ್ತಿತರ ಸಮಸ್ಯೆಗಳಿಂದ ಬಹುಕಾಲದಿಂದ ನಲುಗುತ್ತಿದ್ದಾರೆ. ಕೊರಗ ಜನಾಂಗದ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗಲು ಕಾರಣಗಳೇನು ಎಂಬ ಕುರಿತು ಅಧ್ಯಯನ ಮಾಡಲು ಸರ್ಕಾರವು ಕೊರಗ ಕಾಲೋನಿಗಳಿಗೆ ಭೇಟಿ ನೀಡಲು ಯೋಜಿಸಿದೆ.
ಸರ್ಕಾರದ ದಾಖಲೆಗಳ ಪ್ರಕಾರ, ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ವಾಸಿಸುವವರನ್ನು ಗಣನೆಗೆ ತೆಗೆದುಕೊಂಡರೂ ಈ ಸಮುದಾಯದ ಜನಸಂಖ್ಯೆಯು ಕೇವಲ 4,000 ಆಗಿದೆ. ಅವರ ಅವನತಿಗೆ ಕಾರಣಗಳನ್ನು ಕಂಡುಹಿಡಿಯಲು ಸಮೀಕ್ಷೆ ನಡೆಸುವಂತೆ ಸಮುದಾಯದ ಸಂಘಟನೆಗಳು ಹಲವಾರು ಬಾರಿ ಸರ್ಕಾರವನ್ನು ಒತ್ತಾಯಿಸಿದ್ದವು. ಈ ಮನವಿಗೆ ಅನುಗುಣವಾಗಿ ಕೊರಗ ಕಾಲೋನಿಗಳಿಗೆ ಹಿರಿಯ ಅಧಿಕಾರಿಗಳನ್ನು ಕಳುಹಿಸಿ ಪ್ರಸ್ತುತ ಪರಿಸ್ಥಿತಿಯನ್ನು ಅಧ್ಯಯನ ಮಾಡಲು ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸಲು ಸಲಹೆ ನೀಡಲು ಸರ್ಕಾರ ಯೋಜಿಸಿದೆ.
ಮೊಟ್ಟಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಇಂತಹ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದೆ. ಕಾಲೋನಿ ನಿವಾಸಿಗಳ ಸಮಸ್ಯೆಗಳನ್ನು ಅಧಿಕಾರಿಗಳ ಮೂಲಕ ಪರಿಹರಿಸಲಾಗುತ್ತದೆ ಎಂದು ಪುತ್ತೂರು ತಹಶೀಲ್ದಾರ್ ರಮೇಶ್ ಬಾಬು ತಿಳಿಸಿದ್ದಾರೆ.