ಬೆಳ್ತಂಗಡಿ: “ಕೊಂದವರು ಯಾರು” ಎಂಬ ಪ್ರಶ್ನೆಯೊಂದಿಗೆ ಬೆಳ್ತಂಗಡಿ ತಾಲೂಕಿನ ಸುತ್ತಮುತ್ತ ನಡೆದಿರುವ ಅತ್ಯಾಚಾರ ಕೊಲೆ ಪ್ರಕರಣಗಳಲ್ಲಿ ಸೂಕ್ತ ತನಿಖೆ ನಡೆಸಿ ಆರೋಪಿಗಳನ್ನು ಕಾನೂನಿನ ಮುಂದೆ ತರುವಂತೆ ಒತ್ತಾಯಿಸಿ ವಿವಿಧ ಮಹಿಳಾ ಸಂಘಟನೆಗಳ ನೇತೃತ್ವದಲ್ಲಿ ಮೌನ ಮೆರವಣಿಗೆ ಹಾಗೂ ಮಹಿಳಾ ನ್ಯಾಯ ಸಮಾವೇಶ ಬೆಳ್ತಂಗಡಿಯಲ್ಲಿ ನಡೆಯಿತು.
ಸಮಾವೇಶದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಹಿಳಾ ಮುಖಂಡೆ ಮಲ್ಲಿಗೆ ಸಿರಿಮನೆ ಕೊಲೆ ಅತ್ಯಾಚಾರ ನಡೆದಿದೆ ಆದರೆ ಆರೋಪಿಗಳು ಸಿಗುತ್ತಿಲ್ಲ! ಅಂದರೆ ಕೊಂದವರು ಯಾರು ಎಂದು ಪ್ರಶ್ನಿಸಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಕೊಂದವರು ಯಾರು ಅವರನ್ನು ಕಾನೂನಿನ ಮುಂದೆ ತಂದು ಶಿಕ್ಷಿಸಿ ಎಂಬುದು ನಮ್ಮ ಬೇಡಿಕೆಯಾಗಿದೆ ನ್ಯಾಯ ಸಿಗುವ ವರೆಗೂ ಮಹಿಳಾ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ ಎಂದರು.
ಹಿರಿಯ ಮಹಿಳಾ ಪರ ಹೋರಾಟಗಾರ್ತಿ ಜ್ಯೋತಿ ಮಾತನಾಡಿ ವೇದವಲ್ಲಿಯಿಂದ ಸೌಜನ್ಯಳ ವರೆಗೆ ಇಲ್ಲಿಯ ವರೆಗೆ ಮಹಿಳೆಯರ ಕೊಲೆ ಅತ್ಯಾಚಾರ ದೌರ್ಜನ್ಯ ನಡೆದಿದೆ ಆದರೆ ಯಾರೂ ಅಪರಾಧಿಗಳು ಇನ್ನೂ ಪತ್ತೆಯಾಗಿಲ್ಲ ನಿರ್ಭಯ ಪ್ರಕರಣದಲ್ಲಿ ಆರೋಪಿಗಳು ಪತ್ತೆಯಾಯಿತು ಇಲ್ಲಿ ಯಾಕೆ ಪತ್ತೆ ಯಾಗುತ್ತಿಲ್ಲ ಎಂದು ವ್ಯವಸ್ಥೆಯನ್ನು ಪ್ರಶ್ನಿಸುತ್ತಿದ್ದೇವೆ ಎಲ್ಲ ಪ್ರಕರಣಗಳಲ್ಲಿಯೂ ಅಪರಾಧಿಗಳು ಪತ್ತೆಯಾಗದಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗುತ್ತಿದೆ
ಆರೋಪಿಗಳನ್ನು ಪತ್ತೆಹಚ್ಚುವ ವರೆಗೂ ಈ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಎಚ್ಚರಿಸಿದರು.
ಹಿರಿಯ ಸಾಹಿತಿ ರೋಹಿಣಿ ಮಾತನಾಡಿ ಈ ನೆಲದಲ್ಲಿ ಮಹಿಳೆರ ನೋವಿನ ಅಳು ಕೇಳಿಸುತ್ತಿದೆ ಅವರಿಗೆ ನ್ಯಾಯ ಕೊಡಿಸಲು ಬಂದಿದ್ದೇವೆ ಎಂದರು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಸುನಂದಮ್ಮ ಮಾತನಾಡಿ ನಾವು ಯಾವುದೆ ರಾಜಕೀಯ ಮಾಡಲು ಬಂದಿಲ್ಲ ಕೊಂದವರು ಯಾರು ಎಂದು ಕೇಳುತ್ತಿದ್ದೇವೆ ಅನ್ಯಾಯಕ್ಕೆ ಈಡಾದ ಹೆಣ್ಣು ಮಕ್ಕಳಿಗೆ ನ್ಯಾಯ ಕೇಳುತ್ತಿದ್ದೇವೆ ಮಹಿಳೆಯರ ಹಕ್ಕುಗಳಿಗಾಗಿ ನಾವು ಮಾತನಾಡಲೇ ಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.
ಮಂಗಳೂರಿನ ಶಶಿಕಲಾ ಶೆಟ್ಟಿ ಮಾತನಾಡಿ ಇದು ಹೋರಾಟದ ಅಂತ್ಯವಲ್ಲ ಆರಂಭ ನ್ಯಾಯಸಿಗುವ ವರೆಗೂ ಇದು ನಿರಂತರವಾಗಿ ಮುಂದುವರಿಯುತ್ತದೆ ಎಂದರು. ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಸನ್ನ ರವಿ ಮಹಿಳೆಯರ ಮೇಲೆ ನಡೆದಿರುವ ದೌರ್ಜನ್ಯ ಗಳು ಬಿಧಾನ ಸಭೆಯಲ್ಲಿ ಚರ್ಚೆಯಾಗಬೇಕಾಗಿತ್ತು ಆದರೆ ಅಲ್ಲಿ ಅದು ಚರ್ಚೆಗೆ ಬರುತ್ತಿಲ್ಲ ನಮ್ಮ ಜನಪ್ರತಿನಿಧಿಗಳು ಜನರ ಪರವಾಗಿಲ್ಲ ಅಧಿಕಾರಿಗಳು ನ್ಯಾಯದ ಪರವಾಗಿಲ್ಲ ಎಂಬುದು ನಮ್ಮ ವ್ಯವಸ್ಥೆಯ ದುರಂತವಾಗಿದೆ ಎಂದರು.
ಸಭೆಯಲ್ಲಿ ನಾಗರಿಕ ಸೇವಾಟ್ರಸ್ಟ್ ನ ವಿದ್ಯಾ ನಾಯಕ್, ಸೌಜನ್ಯ ತಂಗಿ ಸೌಂದರ್ಯ, ಅನಸೂಯಮ್ಮ, ಸೇರಿದಂತೆ ಹಲವರು ಮಾತನಾಡಿ ನ್ಯಾಯಪರ ಹೋರಾಟಕ್ಕೆ ಬೆಂಬಲ ಘೋಷಿಸಿದರು. ಈಶ್ವರಿ ಪದ್ಮುಂಜ ಕೊಂದವರು ಯಾರು ಎಂಬ ಗೀತೆಯ ಮೂಲಕ ಗಮನ ಸೆಳೆದರು.ನ್ಯಾಯ ಸಮಾವೇಶದ ಅಂಗವಾಗಿ ಬೆಳ್ತಂಗಡಿ ಮಾರಿಗುಡಿಯಿಂದ ಮಿನಿ ವಿಧಾನ ಸೌಧದ ವರೆಗೆ ನೂರಾರು ಮಹಿಳೆಯರ ಮೌನ ಮೆರವಣಿಗೆ ನಡೆಯಿತು.
ರಾಜ್ಯದ ವಿವಿಧ ಭಾಗಗಳಿಂದ ನೂರಾರು ಮಹಿಳೆಯರು ಸಮಾವೇಶದಲ್ಲಿ ಭಾಗಿಗಳಾದರು.ಸಭೆಯ ಬಳಿಕ ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.ಎಸ್.ಐ.ಟಿ ಕಚೇರಿಗೆ ತೆರಳಿ ಸೆಕಾರದ ಮಾರ್ಗಸೂಚಿಯಂತೆ ಎಲ್ಲ ಪ್ರಕರಣಗಳ ಬಗ್ಗೆ ಸಮಗ್ರವಾದ ತನಿಖೆಯನ್ನು ನಡೆಸುವಂತೆ ಮನವಿ ಸಲ್ಲಿಸಿದರು.


