ಮಂಗಳೂರು: ಉದ್ಯಮಿಯ ಒತ್ತೆಯಾಳಾಗಿರಿಸಿ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಫಳ್ನೀರ್ ನಿವಾಸಿ ದಿವ್ಯದರ್ಶನ(DD) ಬಂಧಿತ ಆರೋಪಿ.
ದುಬೈನಲ್ಲಿ ಉದ್ಯೋಗಿಯಾಗಿದ್ದ ಕೇರಳ ಮೂಲದ ಮುಹಮ್ಮದ್ ಹನೀಫ್ ಎಂಬವರನ್ನು 2019-20ನೆ ಸಾಲಿನ ಅವಧಿಯಲ್ಲಿ ಜೀವ ಬೆದರಿಕೆ ಇದೆ ಎಂಬುದಾಗಿ ಹೇಳಿ ಅವರನ್ನು ಸುಮಾರು ಎರಡೂವರೆ ತಿಂಗಳ ಕಾಲ ಒತ್ತೆಯಾಳಾಗಿರಿಸಿ ಲಕ್ಷಾಂತರ ರೂ. ಸುಲಿಗೆ ಮಾಡಿದ್ದಲ್ಲದೆ, ಪೊಲೀಸ್ ಅಧಿಕಾರಿಗಳು ಸೇರಿದಂತೆ ಪ್ರಭಾವಿಗಳ ಜತೆ ಸಂಪರ್ಕವಿರುವುದಾಗಿ ಹೇಳಿ ವಂಚಿಸಿದ್ದ. ತನ್ನದೇ ಸಹಚರರಿಂದ ಹನೀಫ್ಗೆ ಜೀವ ಬೆದರಿಕೆಯ ಭಯ ಹುಟ್ಟಿಸಿ ಅವರಿಂದ ಒಂದು ಬಾರಿ 30 ಲಕ್ಷ ಹಾಗೂ ಇನ್ನೊಂದು ಬಾರಿ 55 ಲಕ್ಷ ರೂ.ಗಳನ್ನು ಸುಲಿಗೆ ಮಾಡಿದ್ದಲ್ಲದೆ, ಶಸ್ತ್ರಾಸ್ತ್ರದ ಮೂಲಕ ಜೀವ ಬೆದರಿಕೆಯನ್ನು ಇರಿಸಿದ್ದ ಕುರಿತು ಕದ್ರಿ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿತ್ತು.
ಹನೀಫ್ರವರ ಸಹೋದನ ವ್ಯವಹಾರಕ್ಕೆ ಸಂಬಂಧಿಸಿ ನೆರವು ನೀಡುವ ನೆಪದಲ್ಲಿ ಅವರ ಜಾಗ್ವಾರ್ ಕಾರನ್ನು ಉಪಯೋಗಿಸಿ ತಾನೇ ಇರಿಸಿಕೊಂಡಿದ್ದ ಎಂದೂ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ. ಅಲ್ಲದೇ ಈತ ಸಿಸಿಬಿ ಪೊಲೀಸರ ಜೊತೆ ಕಾರು ಮಾರಾಟ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ.