ಮಂಗಳೂರು: ಸಾರಿಗೆ ಬಸ್ಸನ್ನು ಸ್ವತಃ ಮಾಜಿ ಸಚಿವ, ವಿಪಕ್ಷ ಉಪನಾಯಕ, ಶಾಸಕ ಯುಟಿ ಖಾದರ್ ಅವರು ಮಂಗಳೂರಲ್ಲಿ ಚಲಾಯಿಸಿ ಗಮನ ಸೆಳೆದಿದ್ದಾರೆ. ಹೌದು ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಜೀರು ಗ್ರಾಮದ ಪಾಣೇಲ ನಾಗರೀಕರು ಬಹಳ ಸಮಯಗಳಿಂದ ಸರ್ಕಾರಿ ಬಸ್ ಗಾಗಿ ಬೇಡಿಕೆ ಸಲ್ಲಿಸಿದ್ದರು.
ಇದಕ್ಕೆ ಸಂಬಂಧಿಸಿದಂತೆ ಸಾರಿಗೆ ಇಲಾಖೆಗೆ ಶಾಸಕ ಯು.ಟಿ. ಖಾದರ್ ಬಸ್ ಒದಗಿಸಿ ಎಂದು ಸೂಚನೆ ನೀಡಿದಾಗ ರಸ್ತೆಯಲ್ಲಿ ದೊಡ್ಡ ಬಸ್ ಸಂಚರಿಸುವ ಅವಕಾಶ ಇಲ್ಲದಿದ್ದರಿಂದ ಪಾಣೇಲ ಜನತೆಯ ಬಸ್ನ ಕನಸು ನನಸಾಗಿಯೇ ಉಳಿದಿತ್ತು. ಆದರೆ ಶಾಸಕ ಯುಟಿ ಖಾದರ್ ಅಷ್ಟಕ್ಕೇ ಸುಮ್ಮನಾಗದೇ ಸುಮಾರು ಒಂದೂವರೆ ಕೋಟಿ ರೂಪಾಯಿ ಅನುದಾನದಲ್ಲಿ ಗ್ರಾಮಚಾವಡಿ – ಪಜೀರು – ಪಾಣೇಲ-ಪಡೀಲ್ ರಸ್ತೆಯನ್ನು ಅಭಿವೃದ್ಧಿಪಡಿಸಿ ಮತ್ತೆ ಸಾರಿಗೆ ಇಲಾಖೆಗೆ ಬಸ್ಸು ಒದಗಿಸಲು ಸೂಚನೆ ನೀಡಿದರು.
ಇದೀಗ ಸಾರಿಗೆ ಇಲಾಖೆಯು ಬಸ್ ಒದಗಿಸಿದೆ. ಇದನ್ನು ಸ್ವತಃ ಮಾಜಿ ಸಚಿವ ಯುಟಿ ಖಾದರ್ ಅವರು ಚಲಾಯಿಸಿ ಉದ್ಘಾಟನೆ ಮಾಡಿದರು. ಈ ಬಸ್ ಬೆಳಗ್ಗೆ 6.30ಕ್ಕೆ ಮಂಗಳೂರು ಕೆ.ಎಸ್.ಆರ್.ಟಿ.ಸಿ. ಬಸ್ಸು ನಿಲ್ದಾಣದಿಂದ ಬಿಟ್ಟು 7.45ಕ್ಕೆ ಪಾಣೇಲ ತಲುಪಲಿದೆ. ಮಂಗಳೂರು – ತೊಕ್ಕೋಟು – ದೇರಳಕಟ್ಟೆ ಕೊಣಾಜೆ – ಗ್ರಾಮ ಚಾವಡಿ-ಪಜೀರು-ಪಾಣೇಲ ಪಡೀಲು – ಬೋಳಿಯಾರು – ಕುರ್ನಾಡು – ಮಿತ್ತಕೋಡಿ ಮಾರ್ಗವಾಗಿ ಸಂಚರಿಸಿ ಮುಡಿಪು ತಲುಪಲಿದೆ. ನಂತರ 8 ಗಂಟೆಗೆ ಮುಡಿಪು ಬಿಟ್ಟು ಅದೇ ಮಾರ್ಗವಾಗಿ ಮಂಗಳೂರು ತಲುಪಲಿದೆ. ಬಸ್ಸು ಬೆಳಗ್ಗೆ ಮತ್ತು ಸಂಜೆ ತಲಾ ಎರಡು ಟ್ರಿಪ್ ಕಾರ್ಯಾಚರಿಸಲಿದೆ.


