ಮೂಡುಬಿದಿರೆ: ಇಲ್ಲಿನ ಒಂಟಿಕಟ್ಟೆ ನಿವಾಸಿ ತಿಲಕ್ ಕುಲಾಲ್, ಈಗಾಗಲೇ ಚಾರ್ಕೋಲ್, ಲೀಪ್ ಆರ್ಟ್ ಹಾಗೂ ಮೊಳೆಯಲ್ಲಿ ಪೋಟ್ರೇಟ್ ರಚಿಸಿ ತಮ್ಮಕೈಚಳಕ ತೋರಿಸಿದ್ದು, ಈಗ ಧಾನ್ಯಗಳಿಂದ ಕಟೀಲು ದುರ್ಗೆಯ ಚಿತ್ರ ರಚಿಸುವ ಮೂಲಕ ಗಮನ ಸೆಳೆದಿದ್ದಾರೆ.
ತಿಲಕ್, ಶ್ರೀ ದುರ್ಗಾಪರಮೇಶ್ವರಿಯ ಚಿತ್ರ ರಚಿಸಲು ಬೆಳ್ತಿಗೆ ಅಕ್ಕಿ, ಸಾಸಿವೆ, ಕಪ್ಪು ಎಳ್ಳು, ಸಾಬಕ್ಕಿ, ಕಪ್ಪು ಹೆಸರನ್ನು 250 ಗ್ರಾಂ ನಂತೆ ಸರಿ ಪ್ರಮಾಣದಲ್ಲಿ ತೆಗೆದುಕೊಂಡಿದ್ದಾರೆ. 2 ಅಡಿ ಉದ್ದ, ಅರ್ಧ ಅಡಿ ಅಗಲದ ಚಿತ್ರ ರಚನೆಗೆ ಮೂರು ದಿನ ತೆಗೆದುಕೊಂಡಿದ್ದಾರೆ.
ಮೊದಲು ಕಟೀಲು ದುರ್ಗೆಯ ಸ್ಕೆಚ್ ಬಿಡಿಸಿ ಹಿಡಿಸೂಡಿ ಕಡ್ಡಿ ಮೂಲಕ ಧಾನ್ಯಗಳನ್ನು ಅಂಟಿಸಲಾಗಿದೆ.ಬಳಿಕ ಧಾನ್ಯಗಳು ಹಾಳಾಗದಂತೆ ವುಡ್ ಪಾಲಿಷ್ ಮಾಡಲಾಗಿದೆ. ಇದರಿಂದ ಇದು ತುಂಬಾ ಬಾಳಿಕೆ ಬರಲು ಸಾಧ್ಯವಿದೆ. ಮೊದಲ ಬಾರಿಗೆ ಧಾನ್ಯ ದ ಮೂಲಕ ಕಟೀಲು ದುರ್ಗೆಯ ಚಿತ್ರ ರಚನೆಯಾಗಿದೆ.
ಇದನ್ನು ಕಟೀಲು ದೇವಳಕ್ಕೆ ನೀಡಲು ತಿಲಕ್ ಯೋಚಿಸಿದ್ದು,ಯಾರಾದರೂ ಖರೀದಿ ಮಾಡಲು ಇಚ್ಚಿಸಿದಲ್ಲಿ ತಯಾರಿಸಿ ಕೊಡುವ ಆಲೋಚನೆ ಹೊಂದಿದ್ದಾರೆ. ಮೂಡುಬಿದಿರೆಯ ಒಂಟಿ ಕಟ್ಟೆ ನಿವಾಸಿ ತಿಲಕ್ ಕುಲಾಲ್ ಫೈನ್ ಆರ್ಟ್ ಕಲಾವಿದನಾಗಿದ್ದು, ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಕಲಾ ಶಿಕ್ಷಣವನ್ನು ಪೂರೈಸಿದ್ದಾರೆ.