ಜಮ್ಮು – ಕಾಶ್ಮೀರದಲ್ಲಿ ಉಗ್ರರು ನಡೆಸುತ್ತಿರುವ ಟಾರ್ಗೆಟ್ ಕಿಲ್ಲಿಂಗ್ ಬಗ್ಗೆ ಕಾಶ್ಮೀರಿ ಪಂಡಿತರು ಆತಂಕ ವ್ಯಕ್ತಪಡಿಸಿದ್ದು, ಈಗಾಗಲೇ 100 ಪಂಡಿತರ ಕುಟುಂಬಗಳು ಕಣಿವೆಯನ್ನು ತೊರೆದಿವೆ. ಭದ್ರತಾ ಪಡೆಗಳು ನಾಗರಿಕರ ಹತ್ಯೆ ನಡೆಸಿದ ಉಗ್ರರನ್ನು ಸದೆಬಡಿದಿದ್ದರೂ ಆತಂಕ ಮಾತ್ರ ದೂರವಾಗಿಲ್ಲ.
ಹಿಂದೆಯೂ ನಮ್ಮ ಮೇಲೆ ದಾಳಿ ನಡೆಯುತ್ತಿದ್ದವು. ಈಗ ಕರೆ ಮಾಡಿ ಹೆಸರು, ವಿಳಾಸ ಪಡೆದುಕೊಂಡು ಹುಡುಕಿ ಹುಡುಕಿ ಪಂಡಿತರನ್ನು ಕೊಲ್ಲುವ ಉಗ್ರರ ರಾಕ್ಷಸೀ ಕೃತ್ಯ ಹೆಚ್ಚುತ್ತಿದೆ. ಸರಕಾರ ನಮ್ಮನ್ನು ಜಿಲ್ಲಾ ಕೇಂದ್ರಗಳಿಗೆ ವರ್ಗ ಮಾಡಿ ರಕ್ಷಣೆ ಒದಗಿಸಿದ ಮಾತ್ರಕ್ಕೆ ದಾಳಿ ನಿಲ್ಲುವುದೇ? ನಾವು ಇತರ ಕಡೆ ಸಂಚಾರ ಮಾಡುವುದಿಲ್ಲವೇ? ಆಗ ನಮ್ಮ ಮೇಲೆ ದಾಳಿ ನಡೆಯುವುದಿಲ್ಲ ಎಂಬುದಕ್ಕೆ ಏನು ಖಾತ್ರಿ ಇದೆ? ಎಂದು ಪ್ರಶ್ನಿಸುವ ಪಂಡಿತರ ಕುಟುಂಬಗಳು, ಉಗ್ರರನ್ನು ಮಟ್ಟ ಹಾಕುವಲ್ಲಿ ಸರಕಾರ ಬಿಗಿ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲದೇ ಹೋದಲ್ಲಿ ನಾವು ವಾಸ ಮಾಡುವುದೇ ಕಷ್ಟವಾಗುತ್ತದೆ ಎಂದು ಪಂಡಿತ ಸಮುದಾಯ ಅಸಹಾಯಕತೆ ವ್ಯಕ್ತಪಡಿಸಿವೆ.
ಈಗಾಗಲೇ ಟಾರ್ಗೆಟ್ ಕಿಲ್ಲಿಂಗ್ ಪ್ರತಿಭಟಿಸಿ ಕಣಿವೆಯಾದ್ಯಂತ ಪ್ರತಿಭಟನೆ ನಡೆಸಿದ್ದರೂ ಪರಿಸ್ಥಿತಿ ಮಾತ್ರ ಸುಧಾರಿಸಿಲ್ಲ. ಇನ್ನು ಎಷ್ಟು ದಿನ ಹೀಗೆ ಭಯದ ವಾತಾವರಣದಲ್ಲಿಯೇ ಬದುಕಬೇಕು? ಎನ್ನುತ್ತಿರುವ ಪಂಡಿತರು ಈಗಾಗಲೇ ಸುರಕ್ಷಿತ ತಾಣ ಅರಸಿ ಕಾಶ್ಮೀರವನ್ನು ತೊರೆಯುತ್ತಿವೆ.ಕೆಲವೇ ತಿಂಗಳಲ್ಲಿ 100 ಪಂಡಿತರ ಕುಟುಂಬಗಳು ಕಾಶ್ಮೀರವನ್ನು ತೊರೆದಿವೆ. ಇವರೆಲ್ಲರೂ ಜಮ್ಮುವಿನ ವಲಸಿಗರ ಶಿಬಿರದಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಸ್ವತಃ ‘ಕಾಶ್ಮೀರಿ ಪಂಡಿತರ ಸಂಘರ್ಷ ಸಮಿತಿ’ ಹೇಳಿದೆ.