ಬೆಂಗಳೂರು: ವಿಧಾನ ಪರಿಷತ್ನಲ್ಲಿ ಡಿಸೆಂಬರ್ 15ರಂದು ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಸಚಿವರಾದ ಜೆ.ಸಿ. ಮಾಧುಸ್ವಾಮಿ, ಕೋಟ ಶ್ರೀನಿವಾಸ ಪೂಜಾರಿ, ಉಪ ಸಭಾಪತಿ ಎಂ.ಕೆ. ಪ್ರಾಣೇಶ್, ಸಭಾಪತಿ ಹುದ್ದೆಯ ನಿರೀಕ್ಷೆ ಯಲ್ಲಿರುವ ಜೆಡಿಎಸ್ನ ಬಸವರಾಜ ಹೊರಟ್ಟಿ ಸೇರಿದಂತೆ ಹಲವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮರಿತಿಬ್ಬೇಗೌಡ ನೇತೃತ್ವದ ಸದನ ಸಮಿತಿ ಶಿಫಾರಸು ಮಾಡಿದೆ.
ಮರಿತಿಬ್ಬೇಗೌಡ ನೇತೃತ್ವದಲ್ಲಿ ಬಿಜೆಪಿಯ ಎಎಚ್ ವಿಶ್ವನಾಥ್, ಎಸ್.ವಿ.ಸಂಕನೂರ, ಕಾಂಗ್ರೆಸ್ ನ ಬಿಕೆ ಹರಿಪ್ರಸಾದ್ ಮತ್ತು ಆರ್ ಬಿ ತಿಮ್ಮಾಪೂರ ಅವರನ್ನೊಳಗೊಂಡ ಸದನ ಸಮಿತಿಯನ್ನು ಸಭಾಪತಿ ಕೆ.ಪ್ರತಾಪ ಚಂದ್ರ ಶೆಟ್ಟಿ ನೇಮಿಸಿದ್ದರು. ಇಂತಹ ಸಮಿತಿಯ ಸದಸ್ಯರಲ್ಲಿ ವಿಶ್ವನಾಥ್, ಸಂಕನೂರು ಸಮಿತಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ದೂರ ಉಳಿಸಿದ್ದರು. ಇದರ ಮಧ್ಯೆಯೂ ಮೂವರು ಸದಸ್ಯರು ವಿಚಾರಣೆ ನಡೆಸಿದ್ದು, ಸಮಿತಿಯ 84 ಪುಟಗಳ ಮಧ್ಯಂತರ ವರದಿಯನ್ನು ಸಿ.ಡಿ. ಸಹಿತ ಸದನದಲ್ಲಿ ಮಂಡಿಸಿದೆ.
ಮಧ್ಯಂತರ ವರದಿಯಲ್ಲಿ, ಉಪ ಸಭಾಪತಿಯಾಗಿದ್ದ ಎಸ್.ಎಲ್.ಧರ್ಮೇಗೌಡ ಅವರು ಕಾನೂನು ಬಾಹಿರವಾಗಿ ಸಭಾಪತಿ ಪೀಠವನ್ನು ಏರಲು ಸಚಿವ ಮಾಧುಸ್ವಾಮಿ ಮತ್ತು ಅಶ್ವತ್ಥ ನಾರಾಯಣ ಪ್ರಚೋದನೆ ನೀಡಿದ್ದಾರೆ. ಸಭಾ ನಾಯಕ ಶ್ರೀನಿವಾಸ್ ಪೂಜಾರಿ ಅವರು ಅರುಣ್ ಶಹಾಪುರ ಅವರಿಗೆ ಕೈ ಸನ್ನೆ ಮೂಲಕ ಪ್ರಚೋದಿಸಿದ್ದಾರೆ. ಉಪ ಸಭಾಪತಿಯವರ ಸೂಚನೆ ಮೇರೆಗೆ ಸದನದಲ್ಲಿ ಮಾಹಿತಯನ್ನು ಮಂಡಿಸುತ್ತಿರುವುದು ವೀಡಿಯೋ ದೃಶ್ಯಾವಳಿಯಲ್ಲಿ ಕಂಡು ಬಂದಿದೆ. ಈ ಮೂವರನ್ನು ಸರ್ಕಾರದ ಯಾವುದೇ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುವುದು ಸೂಕ್ತವಲ್ಲ ಎಂದು ವರದಿಯಲ್ಲಿ ತಿಳಿಸಿದೆ.
ಕಾರ್ಯದರ್ಶಿ ವಿರುದ್ಧವೂ ಕ್ರಮ
ಪರಿಷತ್ತಿನ ಕಾರ್ಯದರ್ಶಿ ಕೆ.ಆರ್. ಮಹಾಲಕ್ಷ್ಮೀ ತಮ್ಮ ಜವಾಬ್ದಾರಿ ಮತ್ತು ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿದ್ದು, ಘಟನೆಯ ಬಗ್ಗೆ ಅಂತಿಮ ವರದಿ ಸಲ್ಲಿಸುವ ವರೆಗೆ ಕಾರ್ಯದರ್ಶಿ ಸ್ಥಾನದಲ್ಲಿ ಕಾರ್ಯನಿರ್ವಹಿಸದಂತೆ ನಿರ್ಬಂಧಿಸಬೇಕು ಎಂದೂ ಹೇಳಿದೆ.
ವರದಿಯಲ್ಲಿ ಏನಿದೆ?
– ಕೋಟ ಶ್ರೀನಿವಾಸ ಪೂಜಾರಿ ಸಹಿತ 3 ಸಚಿವರಿಗೆ ಜವಾಬ್ದಾರಿಯುತ ಹುದ್ದೆ ಬೇಡ.
– ಅಶ್ವತ್ಥನಾರಾಯಣ, ಜೆ.ಸಿ. ಮಾಧುಸ್ವಾಮಿಗೆ 2 ಅಧಿವೇಶನಗಳಿಗೆ ನಿರ್ಬಂಧ ವಿಧಿಸಬೇಕು.
– ಪ್ರಾಣೇಶ್, ನಾರಾಯಣಸ್ವಾಮಿ, ಅರುಣ್ ಶಹಾಪುರ ಅಸಂಸದೀಯ ನಡವಳಿಕೆ ತೋರಿದ್ದಾರೆ.
– ಹೊರಟ್ಟಿ, ಶ್ರೀಕಂಠೇಗೌಡ, ಆಯನೂರು ಮಂಜು ನಾಥ್ರನ್ನು 2 ಅಧಿವೇಶನಕ್ಕೆ ನಿರ್ಬಂಧಿಸಬೇಕು.