ಕಾರ್ಕಳ: ಸಪ್ಪೆಂಬರ್ ೨ರಂದು ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ ನಲ್ಲೂರು ಗ್ರಾಮದ ಬಾಹುಬಲಿ ಸ್ವೀಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ತನ್ನ ಪ್ರಿಯಕರನಾಗಿರುವ ಅಸ್ಸಾಂ ಮೂಲದ ಭುವನ ಎಂಬಾತನೊಂದಿಗೆ ತಮಿಳುನಾಡಿದ ಕೃಷ್ಣಗಿರಿ ಎಂಬಲ್ಲಿ ಪತ್ತೆಯಾಗಿದ್ದಾಳೆ.
ಅವರಿಬ್ಬರನ್ನು ಕಾರ್ಕಳ ಗ್ರಾಮಾಂತರ ಠಾಣಾಧಿಕಾರಿ ನಜೀರ್ ಹುಸೈನ್ ನೇತೃತ್ವದಲ್ಲಿ ಪೊಲೀಸರ ತಂಡವು ಕಾರ್ಕಳಕ್ಕೆ ಕರೆತರಲಾಗುತ್ತಿದೆ.
ಇಂದು ತಮಿಳುನಾಡಿನಲ್ಲಿ ಪತ್ತೆಯಾಗಿರುವ ಮಾಳ ಮಾಜಲ್ತಾರ್ನ ಯುವತಿಗೆ ಸ್ವಜಾತಿಯ ಯುವಕನೊಂದಿಗೆ ವಿವಾಹ ನಿಶ್ಚಿತವಾಗಿತ್ತು. ಆ ಯುವಕನೊಂದಿಗೆ ವಿವಾಹವಾಗಲು ಆಕೆಗೆ ಇಷ್ಟವಿರಲಿಲ್ಲ. ಈ ಕುರಿತು ಆಕೆ ತನ್ನ ತಂಗಿಗೆ ಕರೆ ಮಾಡಿ ನಿಶ್ಚಿತವಾದ ಹುಡುಗನೊಂದಿಗೆ ವಿವಾಹವಾಗಲು ಇಷ್ಟವಿಲ್ಲದ ಕಾರಣ ಮನೆಬಿಟ್ಟು ಹೋಗುತ್ತಿರುವುದಾಗಿ ತಿಳಿಸಿದ್ದಳು.
ಈ ನಡುವೆ ಅಕ್ಕನ ಮಾತಿನಿಂದ ಆಘಾತಗೊಂಡ ತಂಗಿ ಅನಂತರ ನೊಂದಿದ್ದಳು. ತೀವ್ರವಾಗಿ ಅಸ್ವಸ್ಥಳಾಗಿದ್ದ ತಂಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಕೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಳು.